ಬೆಂಗಳೂರು : ರಾಜಕೀಯ ದ್ವೇಷದಿಂದ ಹೆಚ್.ಡಿ.ಕುಮಾರಸ್ವಾಮಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ.ಕುಮಾರಸ್ವಾಮಿ ಪುಸ್ತಕ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದರು. ನಾನು ಒಂದೇ ಒಂದು ಗುಂಟೆ ಜಾಗವನ್ನೂ ಡಿನೋಟಿಫೈ ಮಾಡಿಲ್ಲ ಎಂದು ಪುನರುಚ್ಚರಿಸಿದರು.
ಹೆಚ್.ಡಿ.ಕೆ ಪುಸ್ತಕ ಬಿಡುಗಡೆ ಮಾಡಿದ್ದು, ಪುಸ್ತಕದ ಹೆಸರು ಅರ್ಕಾವತಿ ಕರ್ಮಕಾಂಡ ಎಂದಿದೆ. ಕರ್ಮಕಾಂಡ ನಡೆದಿರುವುದು ಬಿಜೆಪಿ ಹಾಗೂ ಹೆಚ್.ಡಿ.ಕೆ ಕಾಲದಲ್ಲಿ ಎಂದು ಗುಡುಗಿದರು.
ಕುಮಾರಸ್ವಾಮಿ ನನ್ನ ವಿರುದ್ಧ ರಾಜಕೀಯ ಉದ್ದೇಶದಿಂದ ಆರೋಪಿಸುತ್ತಿದ್ದಾರೆ. ದಾಖಲೆಗಳೆಲ್ಲಾ ಅವರ ಪುಸ್ತಕದಲ್ಲಿಯೇ ಇದೆ. ಅದನ್ನು ನ್ಯಾ.ಕೆಂಪಣ್ಣ ಆಯೋಗಕ್ಕೆ ಸಲ್ಲಿಸಲಿ ಎಂದು ತಿಳಿಸಿದ್ದಾರೆ.
ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ’ಅರ್ಕಾವತಿ ಕರ್ಮಕಾಂಡ: ಸತ್ಯ ಮಿಥ್ಯೆಗಳ ಇಣುಕು ನೋಟ' ಎಂಬ ಪುಸ್ತಕ ಬಿಡುಗಡೆ ಮಾಡಿ ಅಧಿವೇಶನದ ನಂತರ ಜನತಾ ನ್ಯಾಯಾಲಯದ ಮುಂದೆ ಹೋಗುವುದಾಗಿ ಘೋಷಿಸಿದ್ದಾರೆ. ಡಿನೋಟಿಫಿಕೇಷನ್ ಮಾಡುವ ಮುಂಚೆಯೇ ಎನ್ಓಸಿ (ನಿರಪೇಕ್ಷಣಾ ಪತ್ರ) ನೀಡಿರುವ ದಾಖಲೆಗಳನ್ನು ಪುಸ್ತಕ ಒಳಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದ 702 ಎಕರೆ ಡಿನೋಟಿಫಿಕೇಷನ್ಗೆ ಸಹಿ ಹಾಕಿ ನ್ಯಾಯಾಲಯವನ್ನೇ ದಾರಿ ತಪ್ಪಿಸುವ ಕೆಲಸ ಮಾಡಿ ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.