ನವದೆಹಲಿ : ತೀವ್ರ ಪೈಪೋಟಿಯಿಂದ ಕೂಡಿದ್ದ ದೆಹಲಿ ವಿಧಾನಸಭೆ ಚುನಾವಣೆ ಅಂತ್ಯಗೊಂಡಿದ್ದು, ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತ ಗಳಿಸಲಿದೆ ಎಂದು ಆರು ಮಾಧ್ಯಮ ಸಂಸ್ಥೆಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಇನ್ನು ಭಾರೀ ನಿರೀಕ್ಷೆ ಹೊಂದಿದ್ದ ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಕಾಂಗ್ರೆಸ್ ಗೆ 5ಕ್ಕಿಂತ ಹೆಚ್ಚು ಸ್ಥಾನಗಳು ದೊರೆಯುವುದಿಲ್ಲ ಎಂದು ಆರೂ ಸಮೀಕ್ಷೆಗಳು ಹೇಳಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 2ನೇ ಸ್ಥಾನದಲ್ಲಿದ್ದ ಆಮ್ ಆದ್ಮಿ ಪಕ್ಷ ಈ ಸಲ ಸೀಟು ಗಳಿಕೆ ಮತ್ತು ಶೇಕಡಾವಾರು ಮತಗಳಲ್ಲಿ ಭಾರಿ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ ಎಂಬುದು ಸಮೀಕ್ಷೆಗಳ ಸಾರ.
ಸಮೀಕ್ಷೆಗಳು ನಿಜವಾದರೆ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ-ಬಿಜೆಪಿ ಅಧ್ಯಕ್ಷ ಅಮಿತ್ ಶಾ-ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಜೋಡಿಗೆ ಭಾರಿ ಮುಖಭಂಗ ಆಗಲಿದೆ. ಮುಂದಿನ ಬಿಹಾರ ಮತ್ತು ಪ.ಬಂಗಾಳ ಚುನಾವಣೆಯಲ್ಲಿ ಭಾರಿ ಗೆಲುವಿನ ನಿರೀಕ್ಷೆ ಹೊಂದಿರುವ ಕೇಸರಿ ಪಡೆಯ ನಾಗಾಲೋಟಕ್ಕೆ ಅಡ್ಡಿಯಾಗಲಿದೆ ಎನ್ನಲಾಗಿದೆ. ಆದರೆ ಫೆಬ್ರವರಿ 10ರಂದು ಮತ ಎಣಿಕೆ ನಡೆಯಲಿದ್ದು, ಅಲ್ಲಿ ಅಂತಿಮ ಚಿತ್ರಣ ದೊರೆಯಲಿದೆ.
ಫೆ.7ರಂದು ನಡೆದ ಮತದಾನದ ವೇಳೆ ಸಂಜೆ 5ರವರೆಗೆ ಈ ಸಮೀಕ್ಷೆಗಳನ್ನು ನಡೆಸಲಾಗಿದೆ. ಸಂಜೆ 6ಕ್ಕೆ ಮತದಾನ ಮುಕ್ತಾಯಗೊಂಡಿದೆ. ಇಂಡಿಯಾ ನ್ಯೂಸ್ ಎಂಬ ವಾಹಿನಿ ನಡೆಸಿರುವ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅತಿ ಗರಿಷ್ಠ 53 ಸ್ಥಾನಗಳು ದೊರೆತಿವೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳನ್ನು ಅತ್ಯಂತ ನಿಖರವಾಗಿ ಹೇಳಿರುವ ಖ್ಯಾತಿಯ ಟುಡೇಸ್ ಚಾಣಕ್ಯ ಕೂಡ ಆಮ್ ಆದ್ಮಿ ಪಕ್ಷಕ್ಕೆ 48 ಸ್ಥಾನಗಳನ್ನು ನೀಡಿದೆ. ಎಬಿಪಿ ನ್ಯೂಸ್-ಎಸಿ ನೀಲ್ಸನ್, ಇಂಡಿಯಾ ಟುಡೇ-ಸಿಸೆರೋ, ಸಿ-ವೋಟರ್-ಇಂಡಿಯಾ ಟೀವಿ ಹಾಗೂ ಇಂಡಿಯಾ ನ್ಯೂಸ್ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಯಲ್ಲೂ ಆಮ್ ಆದ್ಮಿ ಪಕ್ಷವೇ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂಬ ಅಂಶ ವ್ಯಕ್ತವಾಗಿದೆ.
ಬಹುತೇಕ ಸಮೀಕ್ಷೆಗಳ ಸರಾಸರಿ ಗಮನಿಸಿದಾಗ ಆಪ್ ಕಳೆದ ಚುನಾವಣೆಗಿಂತ ಶೇ.12ರಷ್ಟು ಹೆಚ್ಚು ಮತ ಗಳಿಸಲಿದೆ. ಕೆಲವೇ ದಿನಗಳ ಹಿಂದಷ್ಟೇ ಆಮ್ ಆದ್ಮಿ ಪಕ್ಷಕ್ಕೆ ಅನೇಕ ಸಮೀಕ್ಷೆಗಳು 2ನೇ ಸ್ಥಾನ ನೀಡಿದ್ದವು. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಚಿತ್ರಣ ಬದಲಾಗಿತ್ತು.