ಬೆಂಗಳೂರು : 'ವಿಶ್ವಹಿಂದೂ ಪರಿಷತ್' ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾಗೆ ನಗರ ಪೊಲೀಸ್ ಆಯುಕ್ತರು ವಿಧಿಸಿರುವ ನಿರ್ಬಂಧಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಪ್ರವೀಣ್ ತೊಗಾಡಿಯಾ ಬೆಂಗಳೂರಿಗೆ ಅಗಮಿಸದಂತೆ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಿ ತೊಗಾಡಿಯಾ ಪರ ವಕೀಲ ಬಿ.ವಿ ಆಚಾರ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಫೆ.5ರಂದು ಪ್ರವೀಣ್ ತೊಗಾಡಿಯಾ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾ.ಅಬ್ದುಲ್ ನಜೀರ್, ತೀರ್ಪನ್ನು ಫೆ.6ರಕ್ಕೆ ಕಾಯ್ದಿರಿಸಿದ್ದರು. ತೀರ್ಪು ಪ್ರಕಟಗೊಂಡಿದ್ದು ತೊಗಾಡಿಯಾ ಅವರಿಗೆ ವಿಧಿಸಿರುವ ನಿರ್ಬಂಧಕ್ಕೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೋಮು ಸಾಮರಸ್ಯ ಕಾಪಾಡುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸುವ ಅಧಿಕಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗಿದೆ. ಆದ್ದರಿಂದ ಪ್ರವೀಣ್ ತೊಗಾಡಿಯಾ ಅವರಿಗೆ ವಿಧಿಸಿರುವ ನಿರ್ಬಂಧಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ನ್ಯಾ.ಅಬ್ದುಲ್ ನಜೀರ್ ಹೇಳಿದ್ದಾರೆ.
ಫೆ.8ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಮುಖ್ಯಾತಿಥಿಯಾಗಿ ವಿಶ್ವಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಆಗಮಿಸಬೇಕಿತ್ತು. ಆದರೆ ಅವರು ಬೆಂಗಳೂರಿಗೆ ಬಂದರೆ ಕೋಮು ಪ್ರಚೋದನೆ ಉಂಟಾಗಲಿದೆ ಎಂಬ ಕಾರಣ ನೀಡಿ ಬೆಂಗಳೂರು ನಗರ ಪೊಲೀಸರು ಪ್ರವೀಣ್ ತೊಗಾಡಿಯಾ ಬೆಂಗಳೂರು ಪ್ರವೇಶಿಸದಂತೆ ಫೆ.5ರಿಂದ 11 ವರೆಗೆ ನಿರ್ಬಂಧ ವಿಧಿಸಿದ್ದರು.
ಪ್ರವೀಣ್ ತೊಗಾಡಿಯಾ ಅವರಿಗೆ ನಿರ್ಬಂಧ ವಿಧಿಸಿರುವುದಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಸಿದ್ದರಾಮಯ್ಯ ಸರ್ಕಾರ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪ ಕೇಳಿಬಂದಿದೆ.