ನವದೆಹಲಿ : ಜಾತಿ ಮತ್ತು ಧರ್ಮಗಳ ನಡುವೆ ಕೋಮು ಸಂಘರ್ಷ ಸೃಷ್ಟಿಸುತ್ತಿರುವ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗೆ ಕರ್ನಾಟಕ ಸರ್ಕಾರ ನಿರ್ಬಂಧ ಹಾಕಬೇಕೆಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಒತ್ತಾಯಿಸಿದ್ದಾರೆ.
ನಾನು ಗೋವಾ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರಮೋದ್ ಮುತಾಲಿಕ್ ಗೆ ರಾಜ್ಯ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದೆ. ಆಗ ನನ್ನ ಮೇಲೆ ಅನೇಕರು ಇಲ್ಲಸಲ್ಲದ ಟೀಕೆ ಮಾಡಿದರೂ ಸೊಪ್ಪು ಹಾಕಿರಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮುತಾಲಿಕ್ ಅವರ ಹೇಳಿಕೆಯನ್ನು ಕೇಳಿಯೂ ಸುಮ್ಮನೆ ಕುಳಿತಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಗೋವಾದಲ್ಲೂ ಮುತಾಲಿಕ್ ಬೆಂಬಲಿಗರು ನೈತಿಕ ಪೊಲೀಸ್ ಗಿರಿ ನಡೆಸಲು ಮುಂದಾಗಿದ್ದರು. ಆ ವೇಳೆ ನನ್ನ ಮೇಲೆ ಅನೇಕ ಒತ್ತಡಗಳು ಬಂದರೂ ರಾಜ್ಯ ಪ್ರವೇಶಿಸದಂತೆ ನಿರ್ಬಂಧ ಹಾಕಿದ್ದೆ. ಸ್ವತಃ ನನ್ನ ಪಕ್ಷದವರೇ ಇದಕ್ಕೆ ಟೀಕೆ ಮಾಡಿದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಹಿಸಿಕೊಂಡಿದ್ದೆ ಎಂದು ಹೇಳಿದ್ದಾರೆ.
ಈಗ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದೆ. ಮುತಾಲಿಕ್ ಬಾಯಿ ಮುಚ್ಚಿಸಲು ಏಕೆ ನಿರ್ಬಂಧ ಹಾಕಬಾರದೆಂದು ಪಾರಿಕ್ಕರ್ ಪ್ರಶ್ನಿಸಿದ್ದಾರೆ. ದೇಶದಲ್ಲಿ ಯಾವುದೇ ಮಸೀದಿ, ಚರ್ಚ್ಗಳ ಮೇಲೆ ದಾಳಿ ನಡೆದರೆ ಅದಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದವರನ್ನು ಕೆಲವರು ದೂರುತ್ತಾರೆ. ಪಶ್ಚಿಮ ಬಂಗಾಳದಲ್ಲಿ ವೃದ್ಧ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವವರು ಬಾಂಗ್ಲಾದಿಂದ ಬಂದ ಮುಸ್ಲಿಮರು. ಉತ್ತರ ಪ್ರದೇಶದಲ್ಲಿ ಅನೇಕ ಚರ್ಚ್ ಗಳ ಮೇಲೆ ದಾಳಿ ನಡೆದಿರುವುದರಲ್ಲಿ ಅಲ್ಪಸಂಖ್ಯಾತರೂ ಭಾಗಿಯಾಗಿದ್ದಾರೆ. ಇಲ್ಲಿ ಸಮಾಜವಾದಿ ನೇತೃತ್ವದ ಅಖಿಲೇಶ್ ಸಿಂಗ್ ಸರ್ಕಾರ ಆಡಳಿತವಿದ್ದರೂ ಏಕೆ ಕ್ರಮಕೈಗೊಂಡಿಲ್ಲ ಎಂದು ಟೀಕಿಸಿದ್ದಾರೆ. ನಮ್ಮ ದೇಶದಲ್ಲಿ ಪ್ರತಿಯೊಂದು ಜಾತಿ, ಧರ್ಮಗಳು ಸ್ವತಂತ್ರವಾಗಿ ತಮ್ಮ ತಮ್ಮ ಆಚರಣೆಗಳನ್ನು ಆಚರಿಸಿಕೊಂಡು ಹೋಗಲು ಸಂವಿಧಾನ ಅವಕಾಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸರ್ವಧರ್ಮ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಜಾತಿ, ಧರ್ಮದ ತಾರತಮ್ಯಕ್ಕೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.