ಪಾಟ್ನಾ : ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾವನೆ ಹೊಂದಿರುವ ಬಿಹಾರದಲ್ಲಿ ಸರ್ಕಾರ ಪತನವಾಗುವ ಸಾಧ್ಯತೆ ಇದೆ.
ಜೆಡಿಯು ನಾಯಕರು ದೆಹಲಿ ಚುನಾವಣೆ ಫಲಿತಾಂಶದ ಬಳಿಕ ನಿತೀಶ್ ಕುಮಾರ್ ಅವರನ್ನು ಬಿಹಾರದ ಮುಖ್ಯಮಂತ್ರಿ ಮಾಡುವ ಚಿಂತನೆಯಲ್ಲಿದ್ದರೆ, ಸಿ.ಎಂ ಪದವಿ ಬಿಟ್ಟುಕೊಡಲು ಸಿದ್ಧರಿಲ್ಲದ ಹಾಲಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವಧಿಗೂ ಮುನ್ನವೇ ವಿಧಾನಸಭೆಯನ್ನೇ ವಿಸರ್ಜಿಸುವ ಚಿಂತನೆ ನಡೆಸುತ್ತಿದ್ದಾರೆ.
ನಿತೀಶ್ ಕುಮಾರ್ ಅವರನ್ನೇ ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂದು ಜೆಡಿಯು ಹಾಗೂ ಅದರ ಮೈತ್ರಿ ಪಕ್ಷ ಆರ್.ಜೆ.ಡಿ ನಿರ್ಧಸಿವೆ. ಆದರೆ ಲೋಕಸಭಾ ಚುನಾವಣೆ ನಂತರ ಬಯಸದೇ ಬಂದ ಭಾಗ್ಯ ಎಂಬಂತೆ ತಮ್ಮ ಪಾಲಿಗೆ ಬಂದಿದ್ದ ಮುಖ್ಯಮಂತ್ರಿ ಪದವಿಯನ್ನು ಬಿಟ್ಟುಕೊಡಲು ಜಿತನ್ ರಾಮ್ ಮಾಂಝಿ ಒಪ್ಪುತ್ತಿಲ್ಲ. ಒಂದು ವೇಳೆ ಸಿ.ಎಂ ಸ್ಥಾನದಿಂದ ಕೆಳಗಿಳಿಯುವಂತೆ ಜೆಡಿಯು ನಾಯಕರು ಒತ್ತಡ ಹಾಕಿದರೆ ಅಧಿಕಾರ ತಮ್ಮ ಕೈತಪ್ಪುವ ಮುನ್ನವೇ ಬಿಹಾರ ವಿಧಾನಸಭೆಯನ್ನು ವಿಸರ್ಜಿಸಿ ಅವಧಿಗೂ ಮುನ್ನವೇ ಚುನಾವಣೆ ನಡೆಸಲು ಮಾಂಝಿ ಪ್ರತಿತಂತ್ರ ರೂಪಿಸಿದ್ದಾರೆ.
ಈ ಪ್ರತಿತಂತ್ರಕ್ಕೆ ಪೂರ್ವ ತಯಾರಿ ಎಂಬಂತೆ, ಫೆ.20ರಂದು ಜಿತನ್ ರಾಮ್ ಮಾಂಝಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಜೆಡಿಯು ನಲ್ಲಿ 25 ಶಾಸಕರು ಮಾಂಝಿ ಅವರನ್ನು ಬೆಂಬಲಿಸುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಯು ಪಕ್ಷದ ವರಿಷ್ಠರು ಅತಿ ಹೆಚ್ಚು ಸ್ಥಾನ ಪಡೆಯುವ ಉದ್ದೇಶದಿಂದ ನಿತೀಶ್ ಕುಮಾರ್ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲು ನಿರ್ಧರಿಸಿದ್ದರು. ಫೆ.15ರೊಳಗೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು. ಇದೀಗ ಜೆಡಿಯು ನಾಯಕರ ತಂತ್ರಕ್ಕೆ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಸಹ ಪ್ರತಿತಂತ್ರ ರೂಪಿಸಲು ಸಿದ್ಧತೆ ನಡೆಸಿದ್ದಾರೆ.