ಬೆಂಗಳೂರು : ಫೆ.6ರಂದು ವಿಧಾನಪರಿಷತ್ ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.
ಆಡಳಿತ ಪಕ್ಷದ ಬಹುತೇಕ ಸದಸ್ಯರು, ಸಚಿವರು ಪರಿಷತ್ ಕಲಾಪಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿ ಸದನದಿಂದ ಹೊರನಡೆದಿದ್ದಾರೆ. ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್, ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಪಿ.ಟಿ ಪರಮೇಶ್ವರ ನಾಯಕ್, ಸೇರಿದಂತೆ ಹಲವರು ಪರಿಷತ್ ಕಲಾಪಕ್ಕೆ ಗೈರು ಹಾಜರಾಗಿದ್ದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಪರಿಷತ್ ನಿಂದ ಹೊರನಡೆದಿದ್ದಾರೆ. ಈ ಮೂಲಕ ಬೆಳಿಗ್ಗೆ ನಡೆಯಬೇಕಿದ್ದ ಪರಿಷತ್ ಕಲಾಪ ವ್ಯರ್ಥವಾಗಿದೆ.
ಫೆ.6ರ ಕಲಾಪದಲ್ಲಿ ಗೈರು ಹಾಜರಾಗಿರುವ ಸಚಿವರು ಪ್ರಶ್ನೋತ್ತರ ಕಲಾಪದಲ್ಲಿ ವಿಪಕ್ಷ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಬೇಕಿತ್ತು. ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ, ಉತ್ತರಿಸುವ ಯೋಗ್ಯತೆ ಇಲ್ಲದೇ ಇದ್ದರೆ ಏಕೆ ಸಚಿವರಾಗಬೇಕು ಎಂದು ಕಿಡಿ ಕಾರಿದ್ದಾರೆ.
ಕಳೆದ ಎರಡು ದಿನಗಳಿಂದಲೂ ವಿಧನಮಂಡಲ ಅಧಿವೇಶನದ ಉಭಯ ಕಲಾಪಗಳಲ್ಲೂ, ಪ್ರವೀಣ್ ತೊಗಾಡಿಯಾ ಅವರ ನಿಷೇಧದ ಕುರಿತು ಗದ್ದಲ ಉಂಟಾಗಿ ಕಲಾಪ ವ್ಯರ್ಥವಾಗಿತ್ತು.