ಬೆಂಗಳೂರು : ವಿದ್ಯುತ್ ಮೀಟರ್ ಖರೀದಿಯಲ್ಲಿ 180 ಕೋಟಿ ಅವ್ಯವಹಾರ ಪ್ರಕರಣ ವಿಧಾನಪರಿಷತ್ ನಲ್ಲಿ ಅತ್ತೆ ಪ್ರತಿಧ್ವನಿಸಿದ್ದು, ಬಿಜೆಪಿ ಸದಸ್ಯರ ಪ್ರತಿಭಟನೆಗೆ ಸಾಕ್ಷಿಯಾಯಿತು.
ವಿದ್ಯುತ್ ಮೀಟರ್ ಖರೀದಿಯಲ್ಲಿ ಅವ್ಯವಹರ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತಂತ್ರ ರೂಪಿಸಿದ್ದು, ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿಷಯ ಪ್ರಸ್ತಾಪಿಸಿದರು.
ಅವ್ಯವಹಾರದ ಬಗ್ಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಎಲ್ ಆಂಡ್ ಜಿ ಕಂಪನಿಗೆ ನೀಡಲಾಗಿದ್ದ ಗುತ್ತಿಗೆ ರದ್ದುಗೊಳಿಸಲಾಗಿದೆ. ತಿಂಗಳಲ್ಲಿ ಹೊಸ ಟೆಂಡರ್ ಕರೆಯುವುದಾಗಿ ಇಂಧನ ಸಚಿವರು ಹೇಳಿದ್ದಾರೆ. ಗುತ್ತಿಗೆ ರದ್ದು ಮಾಡಿರುವುದೇಕೆ? ಈ ಬಗ್ಗೆ ಮಾಹಿತಿ ನೀಡಿ ಎಂದು ಈಶ್ವರಪ್ಪ ಆಗ್ರಹಿಸಿದರು.
ಅವ್ಯವಹಾರದ ಬಗ್ಗೆ ಸಂಪೂರ್ಣ ದಾಖಲೆಗಳನ್ನು ನೀಡಿದ್ದೇವೆ. ಕನಿಷ್ಠ ಎರಡು ಕುರಿ ಬಲಿಯಾಗುತ್ತೆ ಅಂದುಕೊಂಡಿದ್ದೆವು. ಆದರೆ ಡಿಕೆಶಿಯವರೇ ಕುರಿಯಾಗಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಮಾಡಿದ ತಪ್ಪಿನಿಂದ ವಿಪಕ್ಷ ಸ್ಥಾನದಲ್ಲಿದ್ದೇವೆ. ನೀವು ನಮಗಿಂತ ಜಾಸ್ತಿ ಹೆಚ್ಚು ತಪ್ಪು ಮಾಡಿದ್ದೀರಾ ಮಾಡಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಅವ್ಯವಹಾರ ಪ್ರಕರಣವನ್ನು ಈಗಲಾದರೂ ಸದನ ಸಮಿತಿ, ಲೋಕಾಯುಕ್ತ ತನಿಖೆಗೆ ಒಪ್ಪಿಸಿ ಎಂದು ಒತ್ತಾಯಿಸಿದರು.
ಈಶ್ವರಪ್ಪ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಬಿಜೆಪಿ ಉಳಿದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಈಶ್ವರಪ್ಪ ನಿಲುವಳಿ ಸೂಚನೆ ಪ್ರಸ್ತಾವನೆಗೆ ಮುಂದಾದರು. ಆದರೆ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಪ್ರಸ್ತಾವನೆ ತಳ್ಳಿಹಾಕಿದರು.