ನವದೆಹಲಿ : ಫೆ.7ರಂದು ನಡೆಯಲಿರುವ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಿದ್ದು, ಚುನಾವಣಾ ಪ್ರಣಾಳಿಕೆ ಬದಲಾಗಿ ವಿಷನ್ ಡಾಕ್ಯೂಮೆಂಟ್ ಬಿಡುಗಡೆ ಮಾಡಿದೆ.
ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಹಾಗೂ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಉಪಾಧ್ಯಾಯ 270 ಅಂಶಗಳ ವಿಷನ್ ಡಾಕ್ಯೂಮೆಂಟ್ ಬಿಡುಗಡೆ ಮಾಡಿದ್ದು, ದೆಹಲಿಯನ್ನು ವಿಶ್ವದರ್ಜೆಯ ನಗರವನ್ನಾಗಿಸುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಮಾದರಿಯಲ್ಲಿ ಕಿರಣ್ ಬೇಡಿಯವರಿಂದ ದಿಲ್ ಕಿ ಬಾತ್ ರೇಡಿಯೋ ಭಾಷಣ ನಡೆಸುವುದಾಗಿ ತಿಳಿಸಿದ್ದಾರೆ. ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಜನರ ಜತೆ ಮಾತುಕತೆ ನಡೆಸಲಾಗುವುದು. ದಿಲ್ ಕಿ ಬಾತ್ ನಲ್ಲಿ ಸರ್ಕಾರದ ಸಚಿವರು, ಶಾಸಕರು ಕೂಡ ಭಾಗವಹಿಸುವರು ಎಂದು ಬೇಡಿ ಭರವಸೆ ನೀಡಿದ್ದಾರೆ.
ವಿಷನ್ ಡಾಕ್ಯೂಮೆಂಟ್ ನ ಪ್ರಮುಖ ಅಂಶಗಳು:
* ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ 500 ಕೋಟಿ ಬಿಡುಗಡೆ
* 1984ರ ಸಿಖ್ ದಂಗೆ ಸಂತ್ರಸ್ತತರಿಗೆ ಪರಿಹಾರ
* ದೆಹಲಿಗೆ ಪಾರದರ್ಶಕ, ಇ-ಆಡಳಿತ ನೀಡುವ ಭರವಸೆ
* ಕೊಳಗೇರಿ ನಿವಾಸಿಗಳಿಗೆ ಪಕ್ಕಾ ಮನೆ ನಿರ್ಮಿಸುವ ಭರವಸೆ
* ಮಹಿಳೆಯರ ರಕ್ಷಣೆ, ಮೂಲ ಸೌಕರ್ಯ ಒದಗಿಸಲು ಆದ್ಯತೆ
* ಸ್ವಚ್ಚತೆ, ಆರೋಗ್ಯ, ಪರಿಸರ ಮಾಲಿನ್ಯ ನಿಯಂತ್ರಿಸಲು ಕ್ರಮ
* ಇ-ಗವರ್ನೆನ್ಸ್, ಟೆಲಿಕಾನ್ಫರೆನ್ಸ್ ಮಾಡಲಾಗುವುದು
* ಜನಸಂಖ್ಯೆ ಇಳಿಕೆಗೆ ಆದ್ಯತೆ
* ಸಾರ್ವಜನಿಕ ಸಾರಿಗೆಗೆ ಪುನರುಜ್ಜೀವನ
* 24 ಗಂಟೆಗಳ ನಿರಂತ ನೀರು ಸರಬರಾಜು
* ಕಡಿಮೆ ದರದಲ್ಲಿ 24 ಗಂಟೆಗಳ ನಿರಂತರ ವಿದ್ಯುತ್ ಸರಬರಾಜು
* ಭ್ರಷ್ಟಾಚಾರ ನಿರ್ಮೂಲನೆ, ದೆಹಲಿಯಲ್ಲಿ ಮೆಟ್ರೋ ಮತ್ತು ರಸ್ತೆ ಅಭಿವೃದ್ಧಿಗೆ ಒತ್ತು
* ಡಿಜಿಟಲ್ ಇಂಡಿಯಾ- ಆನ್ಲೈನ್ ಮತ್ತು ಮೊಬೈಲ್ ತಂತ್ರಜ್ಞಾನ ಬಳಕೆ
* ದೆಹಲಿಯ 35 ಪ್ರದೇಶಗಳ ಅಭಿವೃದ್ಧಿಗೆ ದೂರದೃಷ್ಠಿ ಯೋಜನೆ.