ಬೆಂಗಳೂರು : ಬಿಡಿಎ ಸೈಟ್ ಹಂಚಿಕೆ ವಿಚಾರ ವಿಧಾನಸಭೆ ಕಲಾಪದಲ್ಲಿ ಚರ್ಚೆಗೆ ಕಾರಣವಾಯಿತು. ಬಿಡಿಎ ಕಲೆಕ್ಷನ್ ಸೆಂಟರ್ ಆಗಿದೆ ಎಂದು ಶಾಸಕ ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ವಿಧಾಸಭಾ ಕಲಾಪದ ವೇಳೆ ವಿಷಯ ಪ್ರಸ್ತಾಪಿಸಿದ ಚಲುವರಾಯಸ್ವಾಮಿ, ಸೈಟ್ ಗಳನ್ನು ಮಾರಾಟ ಆಡುವುದು ಬಿಡಿಎ ಕೆಲಸ. ಆದರೆ ಬಿಡಿಎ ಕಲೆಕ್ಷನ್ ಸೆಂಟರ್ ಆಗಿದೆ. 10 ವರ್ಷಗಳಿಂದ ಒಂದು ಸೈಟ್ ಸಹ ಹಂಚಿಕೆ ಮಾಡಿಲ್ಲ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಡಿಎ ಸಂಸ್ಥೆಗೆ ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಈಗ ಅದು ಸರಿದಾರಿಗೆ ಬರುತ್ತಿದೆ ಎಂದರು. ಅಲ್ಲದೇ ಬಿಡಿಎ ಆಡಳಿತ, ಕ್ರಿಯಾ ಯೋಜನೆ ಬದಲಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ, ಬಿಡಿಎ ವಿಕೇಂದ್ರೀಕರಣವಾಗಬೇಕು ಆಗ್ರಹಿಸಿದರು. ಬಳ್ಳಾರಿ ಮಣ್ಣು, ಬೆಂಗಳೂರು ನೆಲದ ದವರೆಗೆ ಬರದಂತೆ ಕ್ರಮಕೈಗೊಳ್ಳಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಬೊಮ್ಮಾಯಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ, ಬಳ್ಳಾರಿ ಮಣ್ಣು, ಬೆಂಗಳೂರು ನೆಲದ ಬಗ್ಗೆ ಅನುಭವವಿದೆ. ನಿಮ್ಮ ಅನುಭವ, ಸಲಹೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ತಿರುಗೇಟು ನೀಡಿದರು.
ಸಿಎಂ ತಿರುಗೇಟಿಗೆ ಪ್ರತಿಕ್ರಿಯಿಸಿದ ಬೊಮ್ಮಾತಯಿ ಇಷ್ಟಿದ್ದರೂ ಬಿಡಿಎ ವಿಚಾರದಲ್ಲಿ ಜಾರಿ ಬೀಳುತ್ತೀದ್ದೀರಾ ಎಂದರು. ಇದಕ್ಕುತ್ತರಿಸಿದ ಸಿಎಂ, ಈ ವಿಚಾರದಲ್ಲಿ ಜಾರಿ ಬಿಳುವ ಪ್ರಶ್ನೆಯೇ ಇಲ್ಲ. ಹಗಲು ಕಂಡ ಬಾವಿಗೆ ನಾನು ಬೀಳುವುದಿಲ್ಲ ಎಂದು ತಿಳಿಸಿದರು.