ಬೆಂಗಳೂರು : ಪಕ್ಷ ತೊರೆಯುವುದರ ಬಗ್ಗೆ ಜೆಡಿಎಸ್ ಶಾಸಕ ಜಮೀರ್ ಅಹಮದ್ ಸ್ಪಷ್ಟನೆ ನೀಡಿದ್ದು ತಾವು ಜೆಡಿಎಸ್ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಫೆ.3ರಂದು ವಿಧಾನಸೌಧದಲ್ಲಿ ಮಾತನಾಡಿದ ಜಮೀರ್ ಅಹಮದ್ ಖಾನ್, ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿಯೇ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಆದರೆ ಪಕ್ಷದ ಯಾವುದೇ ಸಮಾವೇಶ, ಸಭೆ, ಕಾರ್ಯಕ್ರಮಗಳಿಗೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ತಾವು ರಾಜಕೀಯ ಕುಂಟುಂಬದಿಂದ ಬಂದವರಲ್ಲ, ತಮಗೂ ಸ್ವಾಭಿಮಾನವಿದೆ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಪದೇ ಪದೇ ಪಕ್ಷ ಬಿಡಲಿ ಎಂಬ ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗಳು ಹೀಗೆ ಮುಂದುವರೆದಲ್ಲಿ ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ಜಮೀರ್ ಅಹಮದ್ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಶಾಸಕ ಚಲುವರಾಯ ಸ್ವಾಮಿ, 'ಮುಖ್ಯಮಂತ್ರಿ ಕಚೇರಿಯಿಂದ ದೇವೇಗೌಡರ ಫೊಟೊ ತೆಗೆದುಹಾಕಿದಾಗ ನಾನೇ ವಿರೋಧಿಸಿದ್ದೆ, ಆದರೆ ಈಗ ದೇವೇಗೌಡರು ಪಕ್ಷ ಬಿಡುವವರು ಬಿಡಲಿ ಎಂದು ಮೇಜು ಕುಟ್ಟಿ ಹೇಳುತ್ತಿದ್ದಾರೆ. ಮುಜುಗರ ಉಂಟುಮಾಡುವ ಇಂತಹ ಮಾತುಗಳನ್ನು ಕೇಳಲು ಸಾಧ್ಯವಿಲ್ಲ. ಆದ್ದರಿಂದ ಪಕ್ಷದ ಸಮಾವೇಶಕ್ಕೆ ಹೋಗಿಲ್ಲ' ಎಂದಿದ್ದಾರೆ.
ಜೆಡಿಎಸ್ ಶಾಸಕನಾಗಿ ಆಯ್ಕೆಯಾಗಿದ್ದು, ಮೂರು ವರ್ಷಗಳ ಕಾಲ ಅಭಿವೃದ್ಧಿ ಕೆಲಸ ಮಾಡುವುದಾಗಿ ಚಲುವರಾಯ ಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ನಲ್ಲಿ ಈಗಾಗಲೇ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಮೀರ್ ಅಹಮದ್, ಚಲುವರಾಯ ಸ್ವಾಮಿ ಸೇರಿದಂತೆ ಹಲವರು ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗೆ ಪಕ್ಷದಲ್ಲಿ ಗೌರವ ಸಿಗುತ್ತಿಲ್ಲ ಎಂಬುದು ಜೆಡಿಎಸ್ ನ ಭಿನ್ನಮತೀಯ ಶಾಸಕರ ಆರೋಪವಾಗಿದೆ. ಸೂಕ್ತಸ್ಥಾನಮಾನ ನೀಡದೇ ಇರುವುದರಿಂದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಚಿಂತನೆಯಲ್ಲಿದ್ದಾರೆ ಜೆಡಿಎಸ್ ನ ಭಿನ್ನಮತೀಯ ಶಾಸಕರು. ಇದಕ್ಕೆ ಪೂರಕವಾಗಿ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆ ಜಮೀರ್ ಅಹಮದ್ ಸೆರಿದಂತೆ ಹಲವು ಶಾಸಕರು ಗೈರು ಹಾಜರಾಗಿದ್ದರು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಜಮೀರ್ ಅಹಮದ್ ಖಾನ್, ತಮಗೆ ಪಕ್ಷ ತೊರೆಯುವ ಉದ್ದೇಶವಿಲ್ಲ. ಆದರೆ ದೇವೇಗೌಡರ ಜೆಡಿಎಸ್ ನಲ್ಲಿ ಇರಲು ಇಚ್ಛಿಸದವರು ಪಕ್ಷ ಬಿಡಲಿ ಎಂಬ ಹೇಳಿಕೆಗಳು ಮುಂದುವರೆದರೆ ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.