ಬೆಂಗಳೂರು : 'ಜೆಡಿಎಸ್' ನಲ್ಲಿ ಭಿನ್ನಾಭಿಪ್ರಾಯ ಇರುವುದು ನಿಜ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತೊಮ್ಮೆ ಒಪ್ಪಿಕೊಂಡಿದ್ದಾರೆ.
ಸೆ.3ರಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ ಭಿನ್ನಾಭಿಪ್ರಯ ಬಗೆಹರಿಸುವ ಉದ್ದೇಶದಿಂದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆಗೆ ಎಲ್ಲಾ ಶಾಸಕರಿಗೂ ಆಹ್ವಾನ ನೀಡಲಾಗಿದೆ. ಆಹ್ವಾನ ನೀಡಿದರೂ ಬರದೇ ಇರುವವರನ್ನು ನಾವೇ ಸಕಲ ರೀತಿಯಲ್ಲೂ ಸನ್ಮಾನ ಮಾಡಿ ಪಕ್ಷದಿಂದ ಹೊರಕಳಿಸುತ್ತೇವೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಜೆಡಿಎಲ್ ಪಿ ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲ, ಮಾಧ್ಯಮಗಳ ಮೂಲಕವಷ್ಟೇ ಈ ಸಭೆ ಬಗ್ಗೆ ತಮಗೆ ತಿಳಿದಿದೆ ಎಂದು ಕುಮಾರಸ್ವಾಮಿ ಪರಮಾಪ್ತ ಜಮೀರ್ ಅಹಮದ್ ಖಾನ್ ಮಾಧ್ಯಮಗಳಿಗೆ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿ.ಎಂ ಹೆಚ್.ಡಿ ಕುಮಾರಸ್ವಾಮಿ, ಜಮೀರ್ ಅಹಮದ್ ಖಾನ್ ಗೆ ಎರಡು ಬಾರಿ ಆಹ್ವಾನ ನೀಡಲಾಗಿದೆ. ಆದರೂ ಜೆಡಿಎಲ್ ಪಿ ಸಭೆಯಲ್ಲಿ ಪಾಲ್ಗೊಳ್ಳದೇ ಇರುವವರಿಗೆ ಸನ್ಮಾನ ಮಾಡಿ ಕಳಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜಮೀರ್ ಅಹಮದ್ ಖಾನ್ ಅವರಿಗೆ ಕನ್ನಡದಲ್ಲಿ ಪತ್ರ ಬರೆಯಲಾಗಿತ್ತು, ಬಹುಶಃ ಅವರಿಗೆ ಉರ್ದು ಅಥವಾ ಇಂಗ್ಲೀಷ್ ನಲ್ಲಿ ಪತ್ರ ಬರೆಯಬೇಕಿತ್ತು, ಕನ್ನಡದಲ್ಲಿ ಪತ್ರ ಬರೆದು ತಪ್ಪು ಮಾಡಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಒಟ್ಟಾರೆ ಜೆಡಿಎಸ್ ಗೊಂದಲಗಳ ಗೂಡಾಗಿದ್ದು, ಸೆ.3ರಂದು ನಡೆಯಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಿನ್ನಾಭಿಪ್ರಾಯ ಇತ್ಯರ್ಥವಾಗುವುದರ ಬಗ್ಗೆಯೂ ಅನುಮಾನ ಮೂಡಿದೆ.