ಬೆಂಗಳೂರು : ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಮುಖ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸಂಘಟಿತ ಹೋರಾಟ ನಡೆಸಲು ತೀರ್ಮಾನಿಸಿವೆ. ಈ ನಿಟ್ಟಿನಲ್ಲಿ ಇಂದಿನಿಂದ ಆರಂಭವಾಗುವ ವಿಧಾನಮಂಡಲದ ಕಲಾಪ ರಂಗೇರುವ ಸಾಧ್ಯತೆ ದಟ್ಟವಾಗಿದೆ.
ಅರ್ಕಾವತಿ ಪ್ರಕರಣದಲ್ಲಿ ಚರ್ಚೆಗೆ ಅವಕಾಶ ಪಡೆದು, ಸರ್ಕಾರದ ಲೋಪಗಳನ್ನು ಜಾಹೀರುಗೊಳಿಸಿ ಸಿಬಿಐ ತನಿಖೆಗೆ ಒತ್ತಡ ಹಾಕುವುದು ಪ್ರತಿಪಕ್ಷಗಳ ಕಾರ್ಯತಂತ್ರ. ಆದರೆ, ನ್ಯಾಯಾಂಗ ವಿಚಾರಣೆ ನಡೆದಿರುವ ಕೇಸನ್ನು ಸದನದಲ್ಲಿ ಪ್ರಸ್ತಾಪಿಸಲು ನಿಯಮಾ ವಳಿಯಲ್ಲಿ ಅವಕಾಶವಿಲ್ಲ ಎಂದು ನಂಬಿರುವ ಕಾಂಗ್ರೆಸ್ ಈ ವಿಚಾರದಲ್ಲಿ ನಿರಾಳವಾಗಿದೆ.
ನ್ಯಾಯಾಂಗ ತನಿಖೆಗೆ ಒಳಪಟ್ಟ ಹತ್ತಾರು ಕೇಸುಗಳ ಬಗ್ಗೆ ಚರ್ಚೆ ನಡೆಸಲು ಪ್ರತಿಪಕ್ಷಗಳು ಸದನದಲ್ಲಿ ಆಗ್ರಹಿಸಿರುವ ಉದಾಹರಣೆಗಳು ಇವೆ. ಇಂತಹ ಸಂದರ್ಭದಲ್ಲಿ ನ್ಯಾಯಂಗ ಸಮಿತಿ, ಟ್ರಿಬ್ಯೂನಲ್ ಹಾಗೂ ನ್ಯಾಯಾಲಯ ಗಳಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳನ್ನು ಚರ್ಚಿಸುವುದು ನ್ಯಾಯಾಂಗ ನಿಂಧನೆ ವ್ಯಾಪ್ತಿಗೆ ಬರುತ್ತದೆ ಎಂಬ ವಿಧಾನಮಂಡಲದ ನಿಯಮಾವಳಿ ಆಧಾರದ ಮೇಲೆ ಇಂತಹ ಆಗ್ರಹಗಳನ್ನು ತಳ್ಳಿಹಾಕಿರುವ ಸಾಧ್ಯತೆಯಿದೆ.
ಬಹಳ ದಿನಗಳ ನಂತರ ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಅರ್ಕಾವತಿ ಪ್ರಕರಣದಿಂದಾಗಿ ಪ್ರತಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಒಗ್ಗಟ್ಟಾಗಿವೆ. ನೇರವಾಗಿ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಈ ಪ್ರಕರಣದಲ್ಲಿ ಅವಕಾಶವಿರುವುದರಿಂದ ಮತ್ತು ಬಿಜೆಪಿಯ ಹಿಂದಿನ ಮೂರು ಮುಖ್ಯಮಂತ್ರಿಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸಿಐಡಿ ತನಿಖೆಗೆ ವಹಿಸುವ ಮೂಲಕ ದ್ವೇಷ ರಾಜಕಾರಣಕ್ಕೆ ಇಳಿದಿರುವ ಕಾಂಗ್ರೆಸ್ಗೆ ಪೆಟ್ಟು ನೀಡಬೇಕು ಎಂಬ ಉದ್ದೇಶ ಎರಡು ಪಕ್ಷದ ನಾಯಕರಲ್ಲಿ ಸಮಾನವಾಗಿದೆ. ಹೀಗಾಗಿ ಉಭಯ ಪಕ್ಷಗಳ ನಾಯಕರು ಈ ವಿಚಾರದಲ್ಲಿ ಸದನದ ಒಳಗೆ ಒಗ್ಗೂಡಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.