ನವದೆಹಲಿ : ಮತದಾರರು ಒಂದು ಬಾರಿ ತಪ್ಪು ಮಾಡಬಹುದು. ಆದರೆ ಪದೇ ಪದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಆಪ್ ನೇತಾರ ಅರವಿಂದ್ ಕೇಜ್ರಿವಾಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಫೆ.7ರಂದು ದೆಹಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಿಬಿಡಿ ಮೈದಾನದಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಳೆ ಸರ್ಕಾರಗಳು ಜನತೆಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿವೆ. ದೆಹಲಿಗೆ ನೂತನ ಸಿಎಂ ಬರಲಿದ್ದು, ನಾನು ಸೂಚಿಸಿದ ಕಿರಣ್ ಬೇಡಿ ಉತ್ತಮ ಆಡಳಿತ ನೀಡಲಿದ್ದಾರೆ ಎಂದರು.
ದೆಹಲಿ ಚಿಕ್ಕ ರಾಜ್ಯ. ಆದರೆ ಇಡೀ ದೇಶನ್ನೇ ಪ್ರತಿನಿಧಿಸುತ್ತದೆ. ಈ ಚುನಾವಣೆ ಇಡೀ ವಿಶ್ವದ ಗಮನ ಸೆಳೆಯುತ್ತದೆ ಎಂದ ಮೋದಿ, ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನತ್ತ ಸಾಗಿದೆ. ದೆಹಲಿ ಜನತೆ ಈ ಬಾರಿ ಸ್ಥಿರ ಸರ್ಕಾರ ನೀಡುವ ಭರವಸೆಯಿದೆ. ಮತದಾರರು ಒಂದು ಬಾರಿ ತಪ್ಪು ಮಾಡಬಹುದು. ಆದರೆ ಪದೇ ಪದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳಲು ಸಾಧ್ಯವಿಲ್ಲ ಎಂದರು.
ನಿಮ್ಮ ಕೂಗು ಆಲಿಸಿ, ನಿಮ್ಮ ಸೇವೆ ಮಾಡಲು ನಾನು ದೆಹಲಿಗೆ ಆಗಮಿಸಿದ್ದೆನೆ ಹೊರತು, ಕೇವಲ ಅಧಿಕಾರದ ಆಸೆಗಾಗಿ ಅಲ್ಲ. 2022ರ ವೇಳೆಗೆ ಗುಡಿಸಲು ಮುಕ್ತ ದೆಹಲಿ ನಿರ್ಮಾಣ ಮಾಡುತ್ತೇವೆ. ಯಮುನಾ ನದಿ ಶುದ್ಧೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.