ನವದೆಹಲಿ : 'ವಾರ್ತಾ ಮತ್ತು ಪ್ರಸಾರ ಇಲಾಖೆ' ಜ.26ರಂದು ಗಣರಾಜ್ಯೋತ್ಸವ ದಿನದಂದು ನೀಡಲಾಗಿದ್ದ ಜಾಹಿರತಿನಲ್ಲಿ ಸಮಾಜವಾದಿ ಜಾತ್ಯತೀತ ಎಂಬ ಪದಗಳನ್ನು ಕೈಬಿಟ್ಟಿದ್ದಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ನಲ್ಲಿ ಕೇಂದ್ರ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸುಧೀಂದ್ರ ಕುಲಕರ್ಣಿ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಗಣರಾಜ್ಯೋತ್ಸವದ ಜಾಹಿರಾತಿನಲ್ಲಿ ಜಾತ್ಯಾತೀತ, ಸಮಾಜವಾದಿ ಎಂಬ ಪದಗಳನ್ನು ಕೈಬಿಟ್ಟಿರುವುದನ್ನು ಖಂಡಿಸಬೇಕೆಂದು ಕರೆ ನೀಡಿದ್ದಾರೆ.
ಬಿಜೆಪಿ ಸಂವಿಧಾನದ ಪೀಠಿಕೆಯಲ್ಲಿ ಜಾತ್ಯಾತೀತ ಹಾಗೂ ಸಮಾಜವಾದಿ ಎಂಬ ಪದಗಳನ್ನು ತೆಗೆದುಹಾಕುವುದೇ ಆದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಲಿ ಎಂದು ಸುಧೀಂದ್ರ ಕುಲಕರ್ಣಿ ಎನ್.ಡಿ.ಎ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಆರ್.ಎಸ್.ಎಸ್ ನಾಯಕರು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಭಾರತ ಜಾತ್ಯಾತೀತ ರಾಷ್ಟ್ರವಾಗಿಯೇ ಉಳಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಬೇಕಿದೆ ಎಂದು ಕುಲಕರ್ಣಿ ಆಗ್ರಹಿಸಿದ್ದಾರೆ.
ಜಾತ್ಯಾತೀತತೆ ಹಾಗೂ ಸಮಾಜವಾದಿ ಸಿದ್ಧಾಂತಗಳು ಪಕ್ಷದ ಸಂವಿಧಾನದಲ್ಲಿರಬೇಕೆಂಬುದು ಅಟಲ್ ಬಿಹಾರಿ ವಾಜಪೇಯಿ ಅವರ ನಿಲುವಾಗಿತ್ತು. ಆದರೆ ಮೋದಿ ಸರ್ಕಾರ ಗಣರಾಜ್ಯೋತ್ಸವದ ಜಾಹಿರಾತಿನಲ್ಲಿ ಈ ಎರಡೂ ಶಬ್ದಗಳನ್ನು ತೆಗೆದುಕುವ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರ ಸಿದ್ಧಾಂತಗಳಿಗೆ ಅಗೌರವ ಸೂಚಿಸಿದೆ ಎಂದು ಕುಲಕರ್ಣಿ ಆರೋಪಿಸಿದ್ದಾರೆ.