ನವದೆಹಲಿ : ಕಿರಣ್ ಬೇಡಿ ಪ್ರವೇಶಕ್ಕೆ ಮುನ್ನ ದೆಹಲಿ ಬಿಜೆಪಿಯು ಮುಳುಗುವ ಅಂಚಿನಲ್ಲಿತ್ತು. ಇದೀಗ ಬಿಜೆಪಿಯನ್ನು ಸಂಪೂರ್ಣವಾಗಿ ಮುಳುಗಿಸುವಿಕೆಯಲ್ಲಿ ಬೇಡಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಕಿರಣ್ ಬೇಡಿ ಬರುವುದಕ್ಕೆ ಮುನ್ನ ದೆಹಲಿ ಬಿಜೆಪಿ ಒಡೆದ ಮನೆಯಾಗಿತ್ತು. ಅಲ್ಲಿ ಗುಂಪುಗಾರಿಕೆಯಿತ್ತು. ಈಗ ಎಲ್ಲ ಗುಂಪುಗಳು ಒಂದಾಗಿದ್ದು, ಕಿರಣ್ ಬೇಡಿಯವರನ್ನು ಮತ್ತು ಆಕೆಯ ಮುಖ್ಯಮಂತ್ರಿ ಪದದ ಆಕಾಂಕ್ಷೆಯನ್ನು ಮುಗಿಸಿ ಹಾಕಲು ಸಿದ್ಧವಾಗಿವೆ ಎಂದು ಲೇವಡಿ ಮಾಡಿದ್ದಾರೆ.
ಕಿರಣ್ ಬೇಡಿ ಬಿಜೆಪಿ ಸೇರಿದರೆಂಬ ಸುದ್ದಿಯನ್ನು ಕೇಳಿ ಅವರಿಗೆ ಬೇರೆ ಪಕ್ಷ ಸೇರಲು ಬಿಜೆಪಿಯೇ ಬೇಕಾಯಿತೇ, ಬೇರೆ ಯಾವ ಪಕ್ಷವೂ ಸಿಗಲಿಲ್ಲವೇ ಎಂಬ ಪ್ರಶ್ನೆ ನನ್ನನ್ನು ಮೊತ್ತ ಮೊದಲಾಗಿ ಕಾಡಿತ್ತು. ನಿಧಿ ಮೂಲ ಗೊತ್ತಾಗದಿರುವ ಪಕ್ಷವನ್ನು ನಾನೆಂದೂ ಸೇರುವುದಿಲ್ಲ ಎಂದಿದ್ದ ಅವರು, ಬಿಜೆಪಿ ಸೇರಿದ್ದೇ ಒಂದು ವೈರುಧ್ಯವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಮತದಾರರು ಆಮ್ ಆದ್ಮಿ ಪಕ್ಷದ 49 ದಿನಗಳ ಆಡಳಿತಾವಧಿಯನ್ನು ನೋಡಿಕೊಂಡು ಹಾಗೂ ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ 7 ತಿಂಗಳ ದುರಾಡಳಿತವನ್ನು ತುಲನೆಮಾಡಿಕೊಂಡು ಓಟು ಹಾಕಲಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ.