ಬೆಂಗಳೂರು : ಸಂಪುಟಕ್ಕೆ ಸತೀಶ್ ಜಾರಕಿಹೊಳಿ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಸಂಪುಟ ಸಚಿವರ ಜತೆ ಮಾತುಕತೆ ನಡೆಸುದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ರಾಜೀನಾಮೆ ಪತ್ರ ತಲುಪಿದೆ. ಅವರ ರಾಜೀನಾಮೆಗೆ ಕಾರಣ ತಿಳಿದುಬಂದಿಲ್ಲ. ಈ ವಿಚಾರವಾಗಿ ಅವರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸುತ್ತೇನೆ. ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಿರುವುದಾಗಿ ಹೇಳಿದರು.
ಸತೀಶ್ ಜಾರಕಿಹೊಳಿ ಬಹಳ ಸೂಕ್ಷ್ಮ ಮನಸ್ಸಿನ ವ್ಯಕ್ತಿ. ಎಲ್ಲವನ್ನೂ ಸೂಕ್ಷ್ಮ ಸಂವೇದನೆಯಿಂದಲೇ ನೋಡುತ್ತಾರೆ. ಖಾತೆ ಬದಲಾವಣೆ ಬಗ್ಗೆ ಮನವಿ ಮಾಡಿದ್ದರು. ಸಂಪುಟ ಪುನಾರಚನೆ ವೇಳೆ ಖಾತೆ ಬದಲಾವಣೆ ಮಾಡುವ ಬಗ್ಗೆ ಈ ಹಿಂದೆಯೇ ಭರವಸೆ ನೀಡಿದ್ದೆ. ಈಗಾಗಲೇ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಬೆಂಗಳೂರಿಗೆ ಬರಲು ತಿಳಿಸಿದ್ದೇನೆ ಎಂದರು.
ಇದೇ ವೇಳೆ ಗೃಹ ಸಚಿವರ ಆಪ್ತ ಸಲಹೆಗಾರ ಕೆಂಪಯ್ಯರನ್ನು ಜಾರಕಿಹೊಳಿ ನಿವಾಸಕ್ಕೆ ತಾವು ಕಳುಹಿಸಿಲ್ಲ ಎಂದು ತಿಳಿಸಿದರು.