ಬೆಂಗಳೂರು : ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸತೀಶ್ ಜಾರಕಿ ಹೋಳಿ ಮನವೊಲಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಕೆ.ಜೆ.ಜಾರ್ಜ್ ಆಪ್ತ ಸಲಹೆಗಾರ ಕೆಂಪಯ್ಯ ಜಾರಕಿಹೋಳಿ ಮನವೊಲಿಕೆ ಯತ್ನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳಗಾವಿಯ ಗೋಕಾಕ್ ನ ಶತೀಶ್ ಜಾರಕಿಹೊಳಿ ನಿವಾಸಕ್ಕೆ ತೆರಳಿರುವ ಕೆಂಪಯ್ಯ ಮಾತುಕತೆ ನಡೆಸಿ, ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸುತ್ತಿದ್ದಾರೆ.
ಆದರೆ ಇತ್ತೀಚಿನ ಮಾಹಿತಿ ಪ್ರಕಾರ, ಸತೀಶ್ ಜಾರಕಿಹೊಳಿ ಯಾವುದೇ ರೀತಿಯ ಮನವೊಲಿಕೆಗೂ ಬಗ್ಗುತ್ತಿಲ್ಲ ಎಂದು ತಿಳಿದುಬಂದಿದೆ. ಅಲ್ಲದೇ ಜಾರಕಿಹೊಳಿ, ಕೆಂಪಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ನನ್ನ ಸಮಸ್ಯೆ ಪರಿಹರಿಸಲು ನೀವು ಯಾರು? ನನ್ನ ಸಮಸ್ಯೆಗೆ ನೀವು ಪರಿಹಾರ ಕೊಡುತ್ತೀರಾ? ನಿಮ್ಮ ಮುಂದೆ ನಾನು ಯಾಕೆ ಸಮಸ್ಯೆ ಹೇಳಿಕೊಳ್ಳಬೇಕು? ನೀವೇನು ಕಾಂಗ್ರೆಸ್ ಹೈಕಮಾಂಡಾ? ಎಂದು ಪ್ರಶ್ನಿಸಿದ್ದಾರೆ.
ನೀವು ಗೃಹ ಸಚಿವರ ಆಪ್ತ ಸಲಹೆಗಾರರಷ್ಟೇ. ಪಕ್ಷದ ವಕ್ತಾರರಂತೆ ವರ್ತಿಸಬೇಡಿ. ನಿಮ್ಮಿಂದಲೇ ಸಮಸ್ಯೆ ಹೆಚ್ಚಾಗುತ್ತದೆ. ನಿಮ್ಮಂತವರಿಂದಲೇ ಸಿಎಂ ಸಿದ್ದರಾಮಯ್ಯ ಹೀಗಾಡುತ್ತಿದ್ದಾರೆ ಎಂದು ಜಾರಕಿಹೊಳಿ, ಕೆಂಪಯ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಅಬಕಾರಿ ಸಚಿವ ಸತೀಶ ಜಾರಕಿ ಹೊಳಿ ಜ.27ರಂದು ಸಂಜೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನನ್ನ ರಾಜಿನಾಮೆಗೆ ಯಾವುದೇ ಅಸಮಾಧಾನ ಕಾರಣವಲ್ಲ. ಬದಲಾಗಿ ಸಮಾಜಮುಖಿ ಕಾರ್ಯಕ್ರಮಗಳಿಗಾಗಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.