ಗೋಕಾಕ್ : ಹಲವು ದಿನಗಳಿಂದ ರಾಜೀನಾಮೆ ನೀಡುವ ಸೂಚನೆ ನೀಡಿತ್ತಾ ಬಂದಿದ್ದ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಜ.27ರಂದು ಸಂಜೆ ಇಲ್ಲಿ ಗೋಕಾಕ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ತಮ್ಮ ನಿರ್ಧಾರ ಪ್ರಕಟಿ ಸಿದ ಜಾರಕಿಹೊಳಿ, ರಾಜೀನಾಮೆ ಪತ್ರವನ್ನು ವಿಧಾನಸಭಾ ಕಾರ್ಯದರ್ಶಿ ಹಾಗೂ ಸಿಎಂ ಕಾರ್ಯದರ್ಶಿ ಅವರಿಗೆ ಬೆಳಗ್ಗೆಯೇ ಫ್ಯಾಕ್ಸ್ ಮೂಲಕ ರವಾನೆ ಮಾಡಿರುವುದಾಗಿ ತಿಳಿಸಿದರು.
ನನ್ನ ರಾಜಿನಾಮೆಗೆ ಯಾವುದೇ ಅಸಮಾಧಾನ ಕಾರಣವಲ್ಲ. ಬದಲಾಗಿ ಸಮಾಜಮುಖಿ ಕಾರ್ಯಕ್ರಮಗಳಿಗಾಗಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷದ ಚಟುವಟಿಕೆಗಳಲ್ಲಿ ನಾನು ಹೆಚ್ಚಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ನನ್ನ ವೈಯುಕ್ತಿಕ ಆಸಕ್ತಿಯ ಕೆಲ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ತಾವು ಮುಖ್ಯಮಂತ್ರಿಗಳೊಂದಿಗೆ ಯಾವುದೇ ರೀತಿಯ ಅಸಮಾಧಾನ ಹೊಂದಿಲ್ಲ. ಮುಂದಿನ ಮೂರೂವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಬೆಳಗ್ಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಿನಾಮೆ ಸಲ್ಲಿಸಿದ್ದೇನೆ. ಅಲ್ಲದೆ ನಾನು ಯಾವುದೇ ಕಾರಣದಿಂದಲೂ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಹೀಗಾಗಿ ನನ್ನ ರಾಜಿನಾಮೆ ಅಂಗೀಕರಿಸುವಂತೆ ಮನವಿ ಮಾಡಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಅಸ್ತಿತ್ವಕ್ಕೆ ಬಂದ ನಂತರ ರಾಜೀನಾಮೆ ನೀಡಿದ 2ನೇ ಸಚಿವ ಸತೀಶ್ ಜಾರಕಿ ಹೊಳಿಯಾಗಿದ್ದಾರೆ. ಈ ಹಿಂದೆ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಸಂತೋಷ್ ಲಾಡ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸತೀಶ್ ಜಾರಕಿಹೊಳಿ ಅ ರಾಜೀನಾಮೆ ನೀಡಿರುವುದನ್ನು ಸಿಎಂ ಆಪ್ತ ವಲಯ ಖಚಿತಪಡಿಸಿದ್ದು, ಆದರೆ, ಈಗಲೇ ಅಂಗೀಕಾರವಿಲ್ಲ ಎಂದು ಸ್ಪಷ್ಟಪಡಿಸಿವೆ.