ಬೆಂಗಳೂರು : 'ಅಬಕಾರಿ ಸಚಿವ' ಸತೀಶ್ ಜಾರಕಿಹೊಳಿ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸದಂತೆ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
ಜ.29ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗಡೆ, ಸತೀಶ್ ಜಾರಕಿಹೊಳಿ ರಾಜೀನಾಮೆ ಅಂಗೀಕರಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಅಬಕಾರಿ ಖಾತೆಯೊಂದಿಗೆ ಸಚಿವ ಜಾರಕಿಹೊಳಿಗೆ ಮತ್ತೊಂದು ಖಾತೆ ನೀಡಿದರೂ ನಿಭಾಯಿಸುವ ಸಾಮರ್ಥ್ಯ ಇದೆ. ಸಚಿವರು ಮದ್ಯ ಮಾರಾಟಗಾರರ ಅನೇಕ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಆದ್ದರಿಂದ ಅವರ ರಾಜೀನಾಮೆಯನ್ನು ಸಿ.ಎಂ ಸಿದ್ದರಾಮಯ್ಯ ಅವರು ಅಂಗೀಕರಿಸಬಾರದು. ಒಂದು ವೇಳೆ ಅಂಗೀಕರಿಸಿದರೆ ಫೆ.4ರಿಂದ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಗೋವಿಂದರಾಜ ಹೆಗಡೆ ಎಚ್ಚರಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಹಾಗೂ ತಮಗೆ ಪ್ರಮುಖ ಖಾತೆಯನ್ನು ನೀಡಬೇಕು ಎಂಬ ಷರತ್ತುಗಳನ್ನು ಮುಂದಿಟ್ಟು ಅಬಕಾರಿ ಸಚಿವ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಸತೀಶ್ ಜಾರಕಿಹೊಳಿಗೆ ಮತ್ತೊಂದು ಖಾತೆ ನೀಡಿದರು ಅಬಕಾರಿ ಖಾತೆಯನ್ನು ಮಾತ್ರ ಅವರಿಗೇ ನೀಡಬೇಕೆಂಬುದು ಒಕ್ಕೂಟದ ಒತ್ತಾಯವಾಗಿದೆ.