ಬೆಂಗಳೂರು : 'ಭ್ರಷ್ಟಾಚಾರ'ದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಶಂಕರಬಿದರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಪಕ್ಷದ ಕಚೇರಿಯಲ್ಲಿ ಇಂದು ನಡೆದ 66ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಂಕರ್ ಬಿದರಿ, ಹಿಂದೆ ಜನಪ್ರತಿನಿಧಿಗಳಿಗೆ ಸಮಾಜ ಸೇವೆ ಮಾಡಬೇಕೆಂಬ ಉದ್ದೇಶ ಇದ್ದುದ್ದರಿಂದ ಅವರು ಹೆಚ್ಚು ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತಿರಲಿಲ್ಲ. ಆದರೆ ಇಂದು ಜನ ಸೇವೆ ನೆಪದಲ್ಲಿ ರಾಜಕಾರಣಿಗಳ ಆಸೆ ಮತ್ತು ದುರಾಸೆಗಳು ಆಕಾಶದ ಎತ್ತರದಷ್ಟು ಬೆಳೆದಿವೆ ಎಂದು ಬೇಸರ ವ್ಯಕ್ತಪಡಿಸಿದರು.
ದುಡ್ಡು ಮಾಡಲೆಂದೇ ರಾಜಕಾರಣಕ್ಕೆ ಬರುವುದೆಂಬ ಮನೋಭಾವನೆ ಬೆಳೆದಿದೆ. ಇದನ್ನು ಹೋಗಲಾಡಿಸಬೇಕಾದ್ದದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಶಂಕರ ಬಿದರಿ ಕರೆ ನೀಡಿದರು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ಭೇದ ಭಾವ ಇರ ಬಾರದು. ಕರ್ನಾಟಕ ಏಕೀಕರಣಕ್ಕೆ ಹಲವು ಮಹನೀಯರು ತ್ಯಾಗ, ಬಲಿದಾನ ನೀಡಿ ಅಖಂಡ ಕರ್ನಾಟಕ ಕಟ್ಟಿದ್ದಾರೆ. ಪ್ರತ್ಯೇಕತೆಯ ಕೂಗನ್ನು ಪ್ರಾರಂಭಿಕ ಹಂತದಲ್ಲೇ ಚುವುಟಿ ಹಾಕಬೇಕು. ಇಲ್ಲದಿದ್ದರೆ ಮುದೊಂದು ದಿನ ಇದು ಅಪಾಯಕಾರಿ ಯಾಗುತ್ತದೆ ಎಂದು ಎಚ್ಚರಿಸಿದರು.