ಬೆಂಗಳೂರು : ನಾವು ಬೆಳೆದವರೇ ಜೆಡಿಎಸ್ ಗೆ ಮುಳುವಾಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜತೆ ಇದ್ದು ಬೆಳೆದು ಈಗ ಬೇರೆ ಮನೆಗೆ ಹೋಗಿರುವವರು ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದರು.
ದೇವೇಗೌಡರ ಕುಟುಂಬ ಬಿಪಿಎಲ್ ಕಾರ್ಡ್ ದಾರರಂತೆ ವರ್ತಿಸುತ್ತಿದ್ದಾರೆ ಎಂಬ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದ ದೇವೇಗೌಡರು, ಅವರೆಲ್ಲಾ ದೊಡ್ಡವರು ನಾನು ಚಿಕ್ಕವನು ಎಂದು ತಿರುಗೇಟು ನೀಡಿದರು.
ಪಕ್ಷವನ್ನು ಸಂಘಟಿಸಿ ತೋರಿಸುವ ಸಾಮರ್ಥ್ಯ ನನಗಿದೆ. ಸದಸ್ಯತ್ವ ಅಭಿಯಾನದ ಮಹತ್ವವೇನೆಂಬುದು ನನಗೆ ತಿಳಿದಿದೆ ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದರು.