ನವದೆಹಲಿ : ಅನಾವಶ್ಯಕ ಕಾರಣಗಳನ್ನು ಮುಂದಿಟ್ಟುಕೊಂಡು ಸಂಸತ್ ಕಲಾಪವನ್ನು ವ್ಯರ್ಥ ಮಾಡದಿರುವಂತೆ ವಿರೋಧ ಪಕ್ಷಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೂಚನೆ ನೀಡಿದ್ದಾರೆ.
ಐಐಟಿ, ಎನ್.ಐ.ಟಿ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಂದರ್ಭದಲ್ಲಿ ಕಳೆದ ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳ ಕೋಲಾಹಲದಿಂದ ಸಂಸತ್ ಅಧಿವೇಶನ ವ್ಯರ್ಥವಾಗಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರಪತಿಗಳು, ವಿರೋಧ ಪಕ್ಷಗಳು ಸುಗಮ ಸಂಸತ್ ಕಲಾಪಕ್ಕೆ ಅವಕಾಶ ನೀಡಬೇಕೆಂದು ಹೇಳಿದ್ದಾರೆ.
ಇದೇ ವೇಳೆ ಸುಗ್ರೀವಾಜ್ನೆಯನ್ನು ಎಲ್ಲಾ ಸಂದರ್ಭಗಳಲ್ಲೂ ಬಳಸದಿರುವಂತೆ ಪ್ರಧಾನಿ ಮೋದಿ ಸರ್ಕಾರಕ್ಕೆ ರಾಷ್ಟ್ರಪತಿ ಪ್ರಣವಬ್ ಮುಖರ್ಜಿ ಸಲಹೆ ನೀಡಿದ್ದಾರೆ. ಸಾಮಾನ್ಯ ಕಾನೂನುಗಳ ಜಾರಿಗೆ ಸುಗ್ರೀವಾಜ್ನೆ ಹೊರಡಿಸುವುದನ್ನು ತಡೆಯಬೇಕು, ಸುಗ್ರೀವಾಜ್ನೆಗೆ ಸೀಮಿತ ಅಧಿಕಾರ ಮಾತ್ರ ಇದೆ ಆದ್ದರಿಂದ ಪ್ರತಿ ಬಾರಿಯೂ ಸುಗ್ರೀವಾಜ್ನೆ ಜಾರಿಗೆ ತರುವುದು ಸೂಕ್ತವಲ್ಲ ಎಂದು ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ಜಾರಿ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲದೇ ಇರುವುದನ್ನು ಉಲ್ಲೇಖಿಸಿದ ರಾಷ್ಟ್ರಪತಿಗಳು, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿರುವುದು ಇಡಿ ರಾಜಕೀಯ ವ್ಯವಸ್ಥೆಯ ಜವಾಬ್ದಾರಿಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.