ನವದೆಹಲಿ : 'ಯುಪಿಎ-2' ಸರ್ಕಾರದಲ್ಲಿ ಸಚಿವೆಯಾಗಿದ್ದ ಕೃಷ್ಣ ತೀರಥ್ ಬಿಜೆಪಿಗೆ ಸೇರ್ಪಡೆಯಾಗಿದ್ದು ದೆಹಲಿ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಅಘಾತ ಉಂಟಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೃಷ್ಣ ತೀರಥ್, ತಾವು ಬಿಜೆಪಿ ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಪಕ್ಷದಲ್ಲಿ ನನ್ನ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಬಿಜೆಪಿ ಸೇರ್ಪಡೆಗೊಳ್ಳುವ ಬಗ್ಗೆ ಜ.19ರಂದು ಅಮಿತ್ ಶಾ ಜೊತೆಗೆ ಕೃಷ್ಣ ತೀರಥ್ ಚರ್ಚೆ ನಡೆಸಿದ್ದರು.
ಕೃಷ್ಣ ತೀರಥ್ ಅವರು ಈ ಹಿಂದೆ ನಾರ್ಥ್-ವೆಸ್ಟ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಬಿಜೆಪಿಗೆ ದಲಿತ ಮತಗಳನ್ನು ಕ್ರೂಢೀಕರಿಸಲು ಮಾಜಿ ಕೇಂದ್ರ ಸಚಿವೆಯ ಸೇರ್ಪಡೆ ಸಹಾಯಕಾರಿಯಾಗಲಿದೆ.
ಇದೇ ವೇಳೆ ಮಾಜಿ ಕೇಂದ್ರ ಸಚಿವೆ ಬಿಜೆಪಿಯಿಂದ ದೆಹಲಿಯ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಯುಪಿಎ ಸರ್ಕಾರದಲ್ಲಿ ಕೃಷ್ಣ ತೀರಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ಜ.19ರ ಸಂಜೆ ಮಾಜಿ ಕೇಂದ್ರ ಸಚಿವೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ.