ನವದೆಹಲಿ : 'ಹೂಡಿಕೆ'ಯನ್ನು ಆಕರ್ಷಿಸಿ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ನೀತಿಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಅಗತ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಜ.19ರಂದು ಚೆನ್ನೈ ನಲ್ಲಿ ನಡೆದ ಸಿಐಐ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅರುಣ್ ಜೇಟ್ಲಿ, ಎಲ್ಲಾ ರೀತಿಯ ಸಬ್ಸಿಡಿಗಳನ್ನು ಕ್ರಮಬದ್ಧಗೊಳಿಸಲಾಗುವುದು ಎಂದು ಹೇಳಿದ್ದಾರೆ. ಜ.1ರಿಂದ ಎಲ್.ಪಿ.ಜಿ ಸಬ್ಸಿಡಿ ಬ್ಯಾಂಕ್ ಮುಖಾಂತರ ಸಾರ್ವಜನಿಕರ ಖಾತೆರೆ ನೇರವಾಗಿ ತಲುಪುತ್ತಿದೆ. ಹಾಗೆಯೇ ಉಳಿದ ಸಬ್ಸಿಡಿಗಳನ್ನು ಮುಂದಿನ ದಿನಗಳಲ್ಲಿ ಕ್ರಮಬದ್ಧಗೊಳಿಸಲಾಗುವುದು ಎಂದು ಜೇಟ್ಲಿ ತಿಳಿಸಿದ್ದಾರೆ.
ಇದೇ ವೇಳೆ ಜಿ.ಎಸ್.ಟಿ(ಸರಕು ಮತ್ತು ಸೇವಾ ತೆರಿಗೆ) ಬಗ್ಗೆಯೂ ಮಾತನಾಡಿರುವ ಅರುಣ್ ಜೇಟ್ಲಿ, ಜಿ.ಎಸ್.ಟಿ ದೇಶದಲ್ಲಿ ವ್ಯಾಪಾರ, ಹೂಡಿಕೆಗೆ ಅನುಕೂಲಕರವಾದ ವಾತಾವರಣ ನಿರ್ಮಾಣ ಮಾಡಲಿದೆ ಎಂದು ಹೇಳಿದ್ದಾರೆ. ಜಿ.ಎಸ್.ಟಿಯನ್ನು ಅನೇಕ ರಾಜ್ಯಗಳು ಸ್ವಾಗತಿಸಿದ್ದು ಸರಕು ಮತ್ತು ಸೇವಾ ತೆರಿಗೆಯಿಂದಾಗಿ ಯಾರಿಗೂ ನಷ್ಟವಾಗುವುದಿಲ್ಲ ಎಂದು ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2015-16ನೇ ಸಾಲಿನ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಆರ್.ಬಿ.ಐ ನ ಮಾಜಿ ಗೌರ್ನರ್ ಬಿಮಾಲ್ ಜಲನ್ ನೇತೃತ್ವದ ಹಣಕಾಸು ಆಯೋಗ ನೀಡಿರುವ ಸಲಹೆಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ. ಹಣಕಾಸು ಆಯೋಗ ನೀಡಿರುವ ಸಲಹೆಗಳ ಪೈಕಿ ಸಬ್ಸಿಡಿಗಳನ್ನು ಕ್ರಮಬದ್ಧಗೊಳಿಸುವುದೂ ಒಂದು ಸಲಹೆಯಾಗಿದ್ದು ಅರುಣ್ ಜೇಟ್ಲಿ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತಿಳಿದುಬಂದಿದೆ.