ನವದೆಹಲಿ : ಕಿರಣ್ ಬೇಡಿ ಬಿಜೆಪಿ ಸೇರ್ಪಡೆಯಾದಾಗಿನಿಂದ ದೆಹಲಿ ಚುನಾವಣಾ ಕಣದ ಚಿತ್ರಣವೇ ಬದಲಾಗಿಹೋಗಿದೆ ಎಂಬ ಮಾತು ಕೇಳಿಬರುತ್ತಿವೆ. ಆದರೆ ಕಿರಣ್ ಬೇಡಿ ಬಿಜೆಪಿ ಸೇರಿರುವುದು ದೇಣಿಗೆ ಸಂಗ್ರಹದ ವಿಷಯದಲ್ಲಿ ಆಮ್ ಆದ್ಮಿಗೆ ಯಾವುದೇ ನಷ್ಟ ಉಂಟುಮಾಡಿಲ್ಲ.
ಕಿರಣ್ ಬೇಡಿ ಬಿಜೆಪಿ ಸೇರಿದ ದಿನದಂದೇ ಆಮ್ ಆದ್ಮಿ ಪಕ್ಷಕ್ಕೆ 64 ಲಕ್ಷ ರೂಪಾಯಿ ದೇಣಿಗೆ ಹರಿದುಬಂದಿದೆ. ಆಮ್ ಆದ್ಮಿ ಪಕ್ಷದ ವೆಬ್ ಸೈಟ್ ನಲ್ಲಿ ಸರಾಸರಿ ದೇಣಿಗೆ ಸಂಗ್ರಹ ಕಿರಣ್ ಬೇಡಿ ಅವರು ಬಿಜೆಪಿ ಸೇರಿದ ದಿನದಂದು ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಇದಕ್ಕೂ ಮುನ್ನ ಆಮ್ ಆದ್ಮಿ ಪಕ್ಷದ ಖಾತೆಯ 2 ವಾರಗಳ ಗಳಿಕೆ 19 ಲಕ್ಷ ರೂಪಾಯಾಗಿತ್ತು. ಆದರೆ ಕಿರಣ್ ಬೇಡಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕಿ ಶಾಜಿಯಾ ಇಲ್ಮಿ ಬಿಜೆಪಿ ಸೇರಿದ ದಿನಗಳಲ್ಲಿ ಆಮ್ ಆದ್ಮಿಗೆ ಹೆಚ್ಚು ಹಣ ಸಂಗ್ರಹವಾಗಿರುವುದು ಅಚ್ಚರಿ ಮೂಡಿಸಿದೆ.