ನವದೆಹಲಿ : 'ದೆಹಲಿ' ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಎಲ್ಲರೂ ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ. ಈ ಪಟ್ಟಿಗೆ ಈಗ ಮಾಜಿ ಆಮ್ ಆದ್ಮಿ ಪಕ್ಷದ ನಾಯಕಿ ಶಾಜಿಯಾ ಇಲ್ಮಿ ಸಹ ಸೇರ್ಪಡೆಗೊಂಡಿದ್ದಾರೆ.
ಜ.16ರಂದು ನವದೆಹಲಿಯಲ್ಲಿ ಬಿಜೆಪಿ ದೆಹಲಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ನೇತೃತ್ವದಲ್ಲಿ ಶಾಜಿಯಾ ಇಲ್ಮಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಮಾಜಿ ಆಮ್ ಆದ್ಮಿ ಪಕ್ಷದ ನಾಯಕಿ ಶಾಜಿಯಾ ಇಲ್ಮಿ ಸಹ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ಸೇರಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಜಿಯಾ ಇಲ್ಮಿ, ಸಾಮಾನ್ಯ ಜನರ ಸೇವೆ ಮಾಡಲು ಇದೇ ಸರಿಯಾದ ಪಕ್ಷ ಎಂದೆನಿಸಿದ್ದರಿಂದ ಬಿಜೆಪಿ ಸೇರಿರುವುದಾಗಿ ತಿಳಿಸಿದ್ದಾರೆ. ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಪಕ್ಷ ಸೇರಿದ್ದು, ಮುಂದಿನ ದಿನಗಳಲ್ಲಿ ಮೋದಿ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ, ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಕಿರಣ್ ಬೇಡಿಯವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಕಿರಣ್ ಬೇಡಿ ಹಾಗೂ ಶಾಜಿಯಾ ಇಲ್ಮಿ ಬಿಜೆಪಿ ಸೇರಿರುವುದು ಕೇಜ್ರಿವಾಲ್ ಪಾಳಯಕ್ಕೆ ಆತಂಕ ತಂದಿದ್ದು, ತಮ್ಮ ಚುನಾವಣಾ ಲೆಕ್ಕಾಚಾರ ತಲೆಕೆಳಗಾಗುವ ಭಯ ಎದುರಾಗಿದೆ ಎನ್ನಲಾಗಿದೆ.