ನವದೆಹಲಿ : ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ದೆಹಲಿ ಚುನಾವಣೆ ಎದುರಿಸುವುದು ಖಚಿತವಾಗಿದೆ.
ಜ.15ರಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಕಿರಣ್ ಬೇಡಿ ಬಿಜೆಪಿ ಸೇರ್ಪಡೆಗೊಂಡರು. ಕಿರಣ್ ಬೇಡಿ ಬಿಜೆಪಿಗೆ ಸೇರ್ಪಡೆಗೊಂಡಿರುವುದರಿಂದ ಅವರು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂಬ ನಿರೀಕ್ಷೆ ಮೂಡಿದೆ.
ಬಿಜೆಪಿ ಸೆರ್ಪಡೆಗೊಂಡ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಿರಣ್ ಬೇಡಿ, ದೆಹಲಿಯಲ್ಲಿ ಸ್ಥಿರ, ಸುಭದ್ರ ಹಾಗೂ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವುದಕ್ಕಾಗಿ ಬಿಜೆಪಿ ತಂಡದೊಂದಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ತಾವು ಈಗ ಮಿಷನ್ ಮೋಡ್ ನಲ್ಲಿರುವುದಾಗಿಯೂ ತಿಳಿಸಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ ಪಡೆದ ಅನುಭವವನ್ನು ಸಮಾಜದ ಏಳಿಗೆಗಾಗಿ ವಿನಿಯೋಗಿಸುವುದಕ್ಕೆ ಅವಕಾಶ ನೀಡಿರುವ ಬಿಜೆಪಿಗೆ ಕಿರಣ್ ಬೇಡಿ ಧನ್ಯವಾದ ಅರ್ಪಿಸಿದ್ದಾರೆ.
ಇದೇ ವೇಳೆ ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಸತೀಶ್ ಉಪಾಧ್ಯಾಯ ಮತ್ತೊಂದು ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದ್ದು, ಈ ವೇಳೇ ಆಪ್ ನ ಮಾಜಿ ನಾಯಕಿ ಶಾಜಿಯಾ ಇಲ್ಮಿ ಬಿಜೆಪಿಗೆ ಸೇರಲಿದ್ದಾರೆ ಎಂದು ಹೇಳಲಾಗಿದೆ.
ಒಟ್ಟಾರೆ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ದೆಹಲಿ ಚುನಾವಣಾ ಆಖಾಡಕ್ಕಿಳಿದಿರುವುದು ಚುನಾವಣಾ ಕಣದಲ್ಲಿ ಹೊಸ ಸಂಚಲನ ಮೂಡಿಸಿದೆ.