ಬೆಂಗಳೂರು : ನಂಜಯ್ಯನಮಠ ವರದಿಯ ಶಿಫಾರಸ್ಸಿನಂತೆ ರಾಜ್ಯದಲ್ಲಿ 439 ಹೊಸ ಗ್ರಾಮ ಪಂಚಾಯತ್ಗಳ ರಚನೆಗೆ ರಾಜ್ಯ ಸಚಿವ ಸಂಪುಟ ಸಮ್ಮಿತಿ ನೀಡಿದೆ.
ರಾಜ್ಯ ಸಚಿವ ಸಂಪುಟದ ಸಭೆಯ ನಂತರ ಪಶುಸಂಗೋಪನೆ ಮತ್ತು ಮುಜರಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರು ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು.
ಗ್ರಾಮ ಪಂಚಾಯತ್ಗಳ ರಚನೆಗೆ ಒಂದು ಬಾರಿಯ ಅನುದಾನ 131.70 ಕೋಟಿ ರೂ ಹಾಗೂ ವಾರ್ಷಿಕ ನಿರ್ವಹಣೆಗೆ 69.5 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿನ ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಧಾಮಗಳು ಮತ್ತು ರಕ್ಷಿತ ಪ್ರದೇಶಗಳ ಸುತ್ತ ಮುತ್ತಲಿನ ಹತ್ತು ಕಿ.ಮೀ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗ ಸೂಚಿಗಳನ್ವಯ ಪರಿಶೀಲಿಸಲು ರಚಿತವಾಗಿರುವ ರಾಜ್ಯ ಸಚಿವ ಸಂಪುಟದ ಉಪ ಸಮಿತಿಯು ಮೂರು ಸಭೆಗಳನ್ನು ನಡೆಸಿದೆ. ಅಲ್ಲದೆ, ಎರಡು ತಂಡಗಳನ್ನು ರೂಪಿಸಿಕೊಂಡು ಸಂಬಂಧಿತ ಜಿಲ್ಲೆಗಳಿಗೆ ಕೂಡಲೇ ಭೇಟಿ ನೀಡಿ, ಬಾಧಿತರೊಂದಿಗೆ ಚರ್ಚಿಸಿ ಜನವರಿ 31 ರೊಳಗೆ ವರದಿ ಸಲ್ಲಿಸುವಂತೆ ಸಚಿವ ಸಂಪುಟ ಉಪಸಮಿತಿಗೆ ಸಂಪುಟ ಸೂಚಿಸಿದೆ.
ಕರ್ನಾಟಕ ಪೂರ್ವ ಪ್ರಸ್ಥ ಭೂಮಿ ಅರಣ್ಯೀಕರಣ ಮೊದಲ ಹಂತಕ್ಕೆ ವೆಚ್ಚವಾಗಿರುವ 742 ಕೋಟಿ ರೂ ಹಾಗೂ ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವ ವೈವಿಧ್ಯಸಂರಕ್ಷಣಾ ಯೋಜನೆ ಎರಡನೇ ಹಂತಕ್ಕೆ ವೆಚ್ಚವಾಗಿರುವ 841 ಕೋಟಿ ರೂ ಮೊತ್ತದ ಕಾರ್ಯಕ್ರಮದ ಮರು ಮೌಲ್ಯಮಾಪನ ನಡೆಸಲು ಹಾಗೂ ಮುಂದಿನ ಎಂಟು ವರ್ಷಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಮೂರನೇ ಹಂತದ ಯೋಜನಾ ವೆಚ್ಚ 1899 ಕೋಟಿ ರೂ ಗಳಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಏಪ್ರಿಲ್ 11 ರಿಂದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ದತ್ತಾಂಶವನ್ನು ದಾಖಲಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ಗೆ ವಹಿಸಲಾಗಿದೆ. ಖರೀದಿಯಲ್ಲಿ ಪಾರದರ್ಶಕತೆ ಕಾಯಿದೆಯ ಅಡಿಯಲ್ಲಿ 4 (ಜಿ) ವಿನಾಯಿತಿ ನೀಡಿರುವ ಈ ಯೋಜನಾ ಮೊತ್ತ 43.09 ಕೋಟಿ ರೂ ಆಗಿದೆ ಎಂದು ಸಚಿವರು ತಿಳಿಸಿದರು.
ಪೊಲೀಸ್ ಇಲಾಖೆಯ ಆಧುನೀಕರಣ ಯೋಜನೆಯ ಅಡಿಯಲ್ಲಿ ಸ್ಟೇಟ್ ಟ್ರೇಡಿಂಗ್ ಕಾರ್ಪೋರೇಷನ್ ಮೂಲಕ 6.95 ಕೋಟಿ ರೂ ವೆಚ್ಚದಲ್ಲಿ ಆಯುಧಗಳನ್ನು ಖರೀದಿಸಲು ಸಚಿವ ಸಂಪುಟ ಅನುಮತಿ ನೀಡಿದೆ.
ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಜಗದ್ಗುರು ಶಿವರಾತ್ರೀಶ್ವರ ಶಿಕ್ಷಣ ಸಂಸ್ಥೆಯ ಹತ್ತು ಎಕರೆ ಭೂಮಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜ್ಞಾನ ಸಂಪನ್ಮೂಲ ಕೇಂದ್ರ ಸ್ಥಾಪಿಸಲು ಸಂಸ್ಥೆಗೆ ಐದು ಕೋಟಿ ರೂ ಅನುದಾನ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ಮಂಗಳೂರಿನಲ್ಲಿ 7.2 ಕೋಟಿ ರೂ, ಬೆಳಗಾವಿಯಲ್ಲಿ 6.3 ಕೋಟಿ ರೂ ಹಾಗೂ ಹೊಸಪೇಟೆಯಲ್ಲಿ 6 ಕೋಟಿ ರೂ ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೂಲಕ ನಿರ್ಮಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.
ಜವಾಹರ್ಲಾಲ್ ನೆಹರೂ ರಾಷ್ಟ್ರೀಯ ನಗರೋತ್ಥಾನ (ನರ್ಮ್) ಯೋಜನೆ ಅಡಿಯಲ್ಲಿ ತಲಾ 31 ಲಕ್ಷ ರೂ ವೆಚ್ಚದಲ್ಲಿ ಖರೀದಿಸಲಾಗಿದ್ದ 143 ಟಾಟಾ ಮಾರ್ಕೋಪೋಲೋ ಹವಾನಿಯಂತ್ರಿತ ಬಸ್ಗಳನ್ನು ನಿಷ್ಕ್ರಿಯಗೊಳಿಸಲು ಸಚಿವ ಸಂಪುಟ ಸಮ್ಮತಿಸಿದೆ. ಇವುಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕಾರ್ಯಾಚರಣೆಯಲ್ಲಿರುವ 98 ಬಸ್ಗಳೂ ಹಾಗೂ ಮೈಸೂರು ನಗರ ಸಾರಿಗೆಯ 45 ಬಸ್ಗಳೂ ಸೇರಿವೆ. ಮೇಲಿಂದ ಮೇಲೆ ದುರಸ್ತಿಗೆ ಬರುತ್ತಿದ್ದ ಈ ಬಸ್ಗಳ ಕಾರ್ಯಾಚರಣೆಯ ಸಂದರ್ಭದಲ್ಲಿ ಅಪಘಾತಗಳು ಸಂಭವಿಸಿವೆ. ಅಲ್ಲದೆ, ನಿರ್ವಹಣಾ ವೆಚ್ಚದಲ್ಲೂ ಸಂಸ್ಥೆಗೆ ನಷ್ಟ ಉಂಟಾಗಿದ್ದ ಹಿನ್ನೆಲೆಯಲ್ಲಿ ಸಂಪುಟ ಈ ತೀರ್ಮಾನ ಕೈಗೊಂಡಿದೆ.