ಬೆಂಗಳೂರು : ಭಯೋತ್ಪಾದಕ ನೆಲೆ ಕೇವಲ ಭಟ್ಕಳ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಭಯೋತ್ಪಾದನೆ ದೇಶದ ಹಲವೆಡೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉಗ್ರರ ನೆಲೆಯನ್ನು ಬೇಧಿಸಿರುವ ಪೊಲೀಸರ ಕ್ರಮಕ್ಕೆ ಅಭಿನಂದನೆ ಸಲ್ಲಿಸಿರುವ ಸಿದ್ದರಾಮಯ್ಯ, 2008ರಿಂದಲೂ ಭಟ್ಕಳದಲ್ಲಿ ಉಗ್ರರ ಅಡಗುತಾಣದ ಬಗ್ಗೆ ಮಾಹಿತಿ ಇತ್ತು ಎಂದು ಹೇಳಿದ್ದಾರೆ.
ಉಗ್ರರ ಸಂಚಿನ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಉಗ್ರರ ಅಡಗುತಾಣಗಳು ದೇಶದ ಎಲ್ಲೆಡೆ ಇದೆ. ರಾಜ್ಯದಲ್ಲಿನ ಉಗ್ರರ ಅಡಗುತಾಣಗಳನ್ನು ಕಂಡುಹಿಡಿಯಲಾಗಿದೆ ಎಂದು ಹೇಳಿದ್ದಾರೆ.
ಗೃಹ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಉಗ್ರರನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಕೈಗೊಂಡಿರುವ ಕ್ರಮ ಅಭಿನಂದನೀಯ ಎಂದು ತಿಳಿಸಿದರು.
ರಾಜ್ಯದಲ್ಲಿ ಅಡಗಿದ್ದ ಉಗ್ರರಿಂದ ಆಗಬಹುದಾಗಿದ್ದ ಅನಾಹುತಗಳು ಅವರ ಬಂಧನದಿಂದ ಬೆಳಕಿಗೆ ಬಂದಿದೆ. ಉಗ್ರರ ವಿಧ್ವಂಸಕ ಕೃತ್ಯಗಳು ನಡೆಯದಂತೆ ಪೊಲೀಸರು ಇನ್ನಷ್ಟು ಎಚ್ಚರಿಕೆ ವಹಿಸಲಿದ್ದಾರೆ.
ಇತ್ತೀಚೆಗೆ ಶಾಲಾ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧ ಉಂಟಾದ ಗಲಭೆಯಲ್ಲಿ ಕಿಡಿಗೇಡಿಗಳ ಕೈವಾಡವಿದೆ. ಬಾಲಕಿಯರ ಪೋಷಕರ ಕೈವಾಡವಿಲ್ಲ ಎಂದು ಗೃಹ ಸಚಿವ ಸ್ಪಷ್ಟಪಡಿಸಿದ್ದಾರೆ.