ಲಖ್ನೌ : 'ಫ್ರಾನ್ಸ್' ರಾಜಧಾನಿ ಪ್ಯಾರೀಸ್ ನಲ್ಲಿ ನಡೆದ ಉಗ್ರರ ಪೈಶಾಚಿಕ ಕೃತ್ಯಕ್ಕೆ ಬೆಂಬಲ ವ್ಯಕ್ತಪಡಿಸಿ, ಪತ್ರಕರ್ತರ ಹತ್ಯೆ ಮಾಡಿದ್ದ ಉಗ್ರರಿಗೆ 51 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದ ಬಿ.ಎಸ್.ಪಿ ನಾಯಕ ಯಾಕೂಬ್ ಖುರೇಷಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಪ್ಯಾರಿಸ್ನಲ್ಲಿ ಬುಧವಾರ ಉಗ್ರರು ಚಾರ್ಲೆ ಹೆಬ್ಡೊ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿ 10 ಮಂದಿ ಪತ್ರಕರ್ತರು ಹಾಗೂ ಇಬ್ಬರು ಪೊಲೀಸರನ್ನು ಹತ್ಯೆ ಮಾಡಿದ್ದರು. ಉಗ್ರರ ಈ ಘಟನೆಯನ್ನು ಮನಸೋ ಇಚ್ಛೆ ಹೊಗಳಿದ್ದ ಖುರೇಷಿ, ಈ ಉಗ್ರರಿಗೆ 51 ಕೋಟಿ ರೂ. ಬಹುಮಾನ ಕೊಡುವುದಾಗಿ ಘೊಷಿಸಿದ್ದರು.
ಪ್ರವಾದಿ ಮಹಮ್ಮದ್ ನನ್ನು ಯಾರೊಬ್ಬರೂ ಟೀಕೆ ಮಾಡಬಾರದು. ವಿಶ್ವಕ್ಕೆ ಶಾಂತಿಧೂತನಾಗಿರುವ ಆತನನ್ನು ಟೀಕೆ ಮಾಡಿದರೆ ಪ್ಯಾರೀಸ್ ನಲ್ಲಿ ನಡೆದ ನರಮೇಧದ ರೀತಿಯಲ್ಲಿ ಹತ್ಯೆ ಮಾಡಬೇಕು ಎಂದು ಖುರೇಷಿ ಅಭಿಪ್ರಾಯಪಟ್ಟಿದ್ದ.
ಈ ಹೇಳಿಕೆ ದೇಶದಲ್ಲಿ ಭಾರೀ ವಿವಾದ ಸೃಷ್ಟಿಸಿತ್ತು. ಹೀಗಾಗಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಖುರೇಷಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಖುರೇಷಿ ಬಂಧನವನ್ನು ದೃಢಪಡಿಸಿರುವ ಉತ್ತರ ಪ್ರದೇಶ ಕಾನೂನು ಮತ್ತು ಸುವ್ಯವಸ್ಥೆ ಐಜಿಪಿ ಎ.ಸತೀಶ್ ಗಣೇಶ್ ಈಗಾಗಲೇ ನಾವು ಅವರನ್ನು ಬಂಧಿಸಿದ್ದೇವೆ. ನಮ್ಮ ದೇಶದಲ್ಲಿ ಹಿಂಸೆಯನ್ನು ಯಾರೊಬ್ಬರೂ ಬೆಂಬಲಿಸಬಾರದೆಂಬ ನಿಯಮವಿದೆ. ನಾವು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ.