ಇಸ್ಲಾಮಾಬಾದ್ : ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಬಂಧಿಸಿ ತರುವ ವ್ಯಕ್ತಿಗೆ 100 ಕೋಟಿ ರೂ. ಬಹುಮಾನ ನೀಡುವುದಾಗಿ ಪಾಕ್ ಸಂಸದ, ಜಮಾತ್ ಎ ಇಸ್ಲಾಮಿ ರಾಜಕೀಯ, ಧಾರ್ಮಿಕ ಸಂಘಟನೆಯ ಮುಖ್ಯಸ್ಥ ಸಿರಾಜ್ ಉಲ್ ಹಖ್ ಘೋಷಿಸಿದ್ದಾನೆ.
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿನ ರಾವಲ್ ಕೋಟ್ನಲ್ಲಿಕ ತನ್ನ ಬೆಂಬಲಿಗರ ಸಭೆ ಉದ್ದೇಶಿಸಿ ಮಾತನಾಡಿದ ಪಾಕ್ ಸಂಸತ್ ನ ಮೇಲ್ಮನೆ ಸದಸ್ಯ(ಸೆನೆಟರ್) ಸಿರಾಜುಲ್ ಉಲ್ ಹಖ್ ಕಾಶ್ಮೀರ ಮತ್ತು ಗುಜರಾತ್ನಲ್ಲಿನ ಅಪಾರ ಸಾವು ನೋವುಗಳಿಗೆ ಮೋದಿ ಕಾರಣ ಎಂದು ದೂರಿದ್ದಾನೆ.
ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ, ಮೋದಿ ನೀವು ಮತ್ತು ನಿಮ್ಮ ಏಜೆಂಟ್ ಗಳಿಗೆ ಸಲಾಹುದ್ದೀನ್ ನನ್ನು ಬಂಧಿಸಲು ಸಾಧ್ಯವಿಲ್ಲ. ಹಾಗೆಯೇ ಸಲಾಹುದ್ದೀನ್ ನನ್ನು ಯಾರು ಬಂಧಿಸುತ್ತೀರೋ ಅವರಿಗೆ 50 ಕೋಟಿ ಕೊಡುವುದಾಗಿ (ಮೋದಿ) ಘೋಷಿಸಿದ್ದೀರಿ. ಅದೇ ರೀತಿ ನಾನು ಹೇಳುತ್ತಿದ್ದೇನೆ, ಯಾರು ನಿಮ್ಮನ್ನು (ಮೋದಿ) ಬಂಧಿಸುತ್ತಾರೋ ಅವರಿಗೆ ನಾನು 1 ಬಿಲಿಯನ್ (100 ಕೋಟಿ) ಬಹುಮಾನ ಕೊಡುತ್ತೇನೆ ಎಂದು ಹೇಳಿದ್ದಾರೆ.
ಕಾಶ್ಮೀರ ಪಾಕಿಸ್ತಾನದ ಅವಿಭಾಜ್ಯ ಅಂಗ, ಪಾಕಿಸ್ತಾನದ ಯಾವ ರಾಜಕಾರಣಿ ಭಾರತದ ಜೊತೆ ಗೆಳೆತನ ಬಯಸುತ್ತಾರೋ ಅವರು ಪಾಕಿಸ್ತಾನ ಮತ್ತು ಕಾಶ್ಮೀರಿಗಳಿಗೆ ದ್ರೋಹಿಗಳು ಎಂದು ಕಿಡಿಕಾರಿದ್ದಾರೆ. ನಿಮಗೆ ಹಿಂದುಸ್ತಾನದ ಜೊತೆ ಗೆಳೆತನ ಬೇಕಾಗಿದ್ದರೆ ನೀವು ಹಿಂದೂಸ್ತಾನಕ್ಕೆ(ದೆಹಲಿ, ಮುಂಬೈ) ಹೋಗಿ. ಆದರೆ ನಿಮಗೆ ಇಸ್ಲಾಮಾಬಾದ್ ನಲ್ಲಿ ಸ್ಥಳವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರ ಬಿಕ್ಕಟ್ಟು ಪ್ರಸ್ತಾಪಿಸಿದ ಸಿರಾಜ್, ಕಾಶ್ಮೀರ ವಿಮೋಚನೆಕ್ಕೆ ಭಾರತ ಅಡ್ಡಗಾಲು ಹಾಕುತ್ತಿದೆ. ಪಾಕಿಸ್ತಾನಕ್ಕೆ ಭಾರತ ಎಂದಿಗೂ ಒಳ್ಳೆಯ ಗೆಳೆಯನಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.
ಇದೇ ವೇಳೆ, 'ಕಾಶ್ಮೀರ ವಿಮೋಚನೆಗೆ ದೊಡ್ಡ ತ್ಯಾಗ ಬಲಿದಾನ ಮಾಡಿದವರ ಬಗ್ಗೆ ಪಾಕಿಸ್ತಾನ ನಾಯಕರು ಮೂಕ, ಕಿವುಡ ಹಾಗೂ ಕುರುಡರಾಗಿದ್ದಾರೆ' ಎಂದು ಟೀಕಿಸಿದ್ದಾನೆ.
ಸಿರಾಜ್ ಉಲ್ ಹಖ್ ಹೇಳಿಕೆಯ ಮುಖ್ಯಾಂಶಗಳು-
* ಕಾಶ್ಮೀರ ಮತ್ತು ಗುಜರಾತ್ನಲ್ಲಿನ ನೂರಾರು ಮುಸ್ಲಿಮರ ಮಾರಣಹೋಮಕ್ಕೆ ಮೋದಿ ಕಾರಣ
* ಪಾಕ್-ಭಾರತದ ಮೈತ್ರಿ ಬಯಸುವ ಜನರು ಇಲ್ಲಿಂದ ತೊಲಗಿ ಮುಂಬಯಿಗೆ ಹೋಗಲಿ.
* ಹುರಿಯತ್ ನಾಯಕ ಗಿಲಾನಿ ಅವರನ್ನು ದಶಕಗಳ ಕಾಲ ಭಾರತ ಸೆರೆಯಲ್ಲಿಟ್ಟಿತು. ಆದರೆ ಈ ಬಗ್ಗೆ ಪಾಕ್ ನಾಯಕರು ಚಕಾರವೆತ್ತದೆ, ಹೇಡಿಗಳಂತೆ ನಡೆದುಕೊಂಡರು.
* ಕಳೆದ 68 ವರ್ಷಗಳಿಂದ ಕಾಶ್ಮೀರದಲ್ಲಿ ಕೆಚ್ಚೆದೆಯ ಕಾಶ್ಮೀರಿ ಮುಸ್ಲಿಮರನ್ನು ದಮನ ಮಾಡಲು ಭಾರತಕ್ಕೆ ಅವಕಾಶ ನೀಡಲಾಗಿದೆ. ಪಾಕ್ ಮುಖಂಡರಿಗೆ ನಾಚಿಕೆಯಾಗಬೇಕು.
ಪ್ರಧಾನಿ ಮೋದಿ ತಲೆಗೆ ನೂರು ಕೋಟಿ ರೂ. ಇನಾಮು ಘೋಷಿಸುವ ಈತನ ಭಾಷಣದ ವಿಡಿಯೊ ಪಾಕಿಸ್ತಾನದ 'ಎಆರ್ವೈ 'ನ್ಯೂಸ್ ಚಾನೆಲ್ ನಲ್ಲಿ ಮಾತ್ರ ಪ್ರಸಾರವಾಗಿದೆ. ನ್ಯಾಯಾಂಗವನ್ನು ಅವಹೇಳನಗೊಳಿಸಿದ್ದ ಈ ಚಾನೆಲ್ ಅನ್ನು ಕಳೆದ ವರ್ಷ ಸುಮಾರು 15 ದಿನಗಳ ಕಾಲ ಅಮಾನತ್ತಿನಲ್ಲಿ ಇಡಲಾಗಿತ್ತು. ಈತನ ಪ್ರಚೋದಕ ಭಾಷಣದ ವಿಡಿಯೊ ಸುದ್ದಿ ಚಾನೆಲ್ ಗಳಲ್ಲಿ ಪ್ರಸಾರವಾಗಿದ್ದು, ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.