ನವದೆಹಲಿ : 'ಐ.ಎಸ್.ಐ.ಎಸ್' ಉಗ್ರರು ಪ್ಯಾರಿಸ್ನ ಪ್ರಮುಖ ವಾರ ಪತ್ರಿಕೆ 'ಚಾರ್ಲಿ ಹೆಬ್ಡೋ' ಪತ್ರಕರ್ತರ ಹತ್ಯೆ ಮಾಡಿರುವುದನ್ನು ಇಡೀ ವಿಶ್ವವೇ ಖಂಡಿಸುತ್ತಿದ್ದರೆ ಬಿ.ಎಸ್.ಪಿ ನಾಯಕ ಮಾತ್ರ 'ಚಾರ್ಲಿ ಹೆಬ್ಡೋ' ಪತ್ರಕರ್ತರ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರವಾದಿಗೆ ಅಪಮಾನ ಮಾಡುವವರಿಗೆ ಪ್ಯಾರೀಸ್ ಪತ್ರಕರ್ತರ ನರಮೇಧ ಪ್ರಕರಣದ ರೀತಿಯೇ ಉತ್ತರ ನೀಡಬೇಕೆಂದು ಬಿ.ಎಸ್.ಪಿ ನಾಯಕ ಹಜಿ ಯಾಕೂಬ್ ಖುರೇಷಿ ಹೇಳಿದ್ದಾರೆ
ಪ್ಯಾರಿಸ್ ಶೂಟೌಟ್ ಪ್ರಕರಣದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಬಿ.ಎಸ್.ಪಿ ನಾಯಕ, ಉಗ್ರರ ದುಷ್ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಪ್ರವಾದಿಗೆ ಅಗೌರವ ತೊರುವವರಿಗೆ ಪ್ಯಾರೀಸ್ ಹತ್ಯಾಕಾಂಡದ ರೀತಿಯಲ್ಲೇ ಶಿಕ್ಷೆ ನೀಡಬೇಕು ಎಂದಿದ್ದಾರೆ.
'ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರಿದ ಪ್ರವಾದಿ ಮೊಹಮ್ಮದ್ ಅವರಿಗೆ ಯಾರೂ ಅವಮಾನ ಮಾಡುತ್ತಾರೋ, ಅವರಿಗೆ ಸಾವೇ ಗತಿ, ಎಂದು ಹಜಿ ಯಾಕೂಬ್ ಖುರೇಷಿ ಹೇಳಿದ್ದಾರೆ. ಅಲ್ಲದೇ ಪ್ಯಾರೀಸ್ ನಲ್ಲಿ ಚಾರ್ಲಿ ಹೆಬ್ಡೋ ಪತ್ರಿಕೆ ಮೇಲೆ ದಾಳಿ ಮಾಡಿದ ಉಗ್ರರಿಗೆ 51 ಕೋಟಿ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಇನ್ನು ಖುರೇಷಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಾಹಾ ನಿರ್ದೇಶಕ ಮುಖುಲ್ ಗೋಯಲ್ ಅವರು, ಖುರೇಷಿಯ ಹೇಳಿಕೆಯನ್ನು ಪರಿಶೀಲಿಸಿದ ನಂತರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇಸಿಸ್ ಮುಖ್ಯಸ್ಥನ ಕುರಿತಂತೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವ್ಯಂಗ್ಯಚಿತ್ರವನ್ನು ವಿರೋಧಿಸಿ ನಿನ್ನೆ ಬೆಳಗ್ಗೆ ಪ್ಯಾರಿಸ್ನ ಪ್ರಮುಖ ವಾರ ಪತ್ರಿಕೆ 'ಚಾರ್ಲಿ ಹೆಬ್ಡೋ' ಮೇಲೆ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಪತ್ರಿಕೆಯ ಮುಖ್ಯ ಸಂಪಾದಕ, 4 ಪ್ರಮುಖ ವ್ಯಂಗ್ಯಚಿತ್ರಕಾರರು, ಕಚೇರಿಯ ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಈ ಘಟನೆಯನ್ನು ಇಡೀ ವಿಶ್ವವೇ ಖಂಡಿಸಿದೆ.