ಪಾಟ್ನಾ : ಜನತಾ ದರ್ಶನ ವೇಳೆ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಮೇಲೆ ಅಪರಿಚಿತ ಯುವಕನೊಬ್ಬ ಚಪ್ಪಲಿ ಎಸೆದಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.
ಎಂದಿನಂತೆ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಬಿಹಾರ ಮುಖ್ಯಮಂತ್ರಿ ಮಾಂಝಿ ಜನತಾದರ್ಶನದಲ್ಲಿ ಪಾಲ್ಗೊಂಡು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಮನವಿ ಪತ್ರಗಳನ್ನು ಸ್ವೀಕರಿಸುತ್ತಿದ್ದರು. ಈ ವೇಳೆ ಸಾರ್ವಜನಿಕ ಗುಂಪಿನಿಂದ ಮುಖ್ಯಮಂತ್ರಿ ಮಾಂಝಿ ಮೇಲೆ ಚಪ್ಪಲಿಯೊಂದು ಬಿದ್ದಿತು.
ಇದರಿಂದ ಗಾಬರಿಗೊಂಡ ಭದ್ರತಾ ಸಿಬ್ಬಂದಿಗಳು ಚಪ್ಪಲಿ ಎಸೆದ ಅಪರಿಚಿತ ಯುವಕನನ್ನು ಕೂಡಲೇ ಬಂಧಿಸಿದರು. ಬಂಧಿತನಾಗಿರುವ ಯುವಕನನ್ನು ಅಮಿತೇಶ್ ಎಂದು ಗುರುತಿಸಲಾಗಿದೆ. ಈತ ಬಿಹಾರದ ಚಾಪ್ರಾ ಪ್ರದೇಶದ ನಿವಾಸಿ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಮಾಂಝಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅಮಿತೇಶ್, ತನ್ನ ಆಕ್ರೋಶ ವ್ಯಕ್ತಪಡಿಸಲು ಈ ರೀತಿ ವರ್ತನೆ ತೋರಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಈ ಕುರಿತು ಪಾಟ್ನಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ಮುಂದುವರೆಸಿದ್ದಾರೆ.