ಇಸ್ಲಾಮಾಬಾದ್ : ಅರಬ್ಬಿ ಸಮುದ್ರದಲ್ಲಿ ಪತ್ತೆಯಾದ ಹಡಗುಗಳು ಪಾಕಿಸ್ತಾನದ ಹಡಗುಗಳಲ್ಲ. ಭಾರತದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಭಾರತಕ್ಕೆ ಮಾಹಿತಿ ರವಾನಿಸಿದೆ.
ಕರಾಚಿಯಿಂದ ಯಾವುದೇ ಹಡಗು ಭಾರತದತ್ತ ಬಂದಿಲ್ಲ. ಗುಜರಾತ್ ನ ಪೋರಬಂದರ್ ಕರಾವಳಿಯಲ್ಲಿ ಪತ್ತೆಯಾಗಿದ್ದು ಪಾಕಿಸ್ತಾನದ ಹಡಗುಗಳಲ್ಲ. ಕೇಟಿ ಬಂದರಿನಿಂದ ಮೀನುಗಾರಿಕೆಗೆಂದು ಯಾವುದೇ ಬೋಟ್ ಗಳು ತೆರಳಿಲ್ಲ. ಬೋಟ್ ನಲ್ಲಿ ಪತ್ತೆಯಾಗಿದ್ದ ಜನರೂ ಕೂಡಾ ನಮ್ಮವರಲ್ಲ ಎಂದು ಪಾಕ್ ತಿಳಿಸಿದೆ.
ಗುಜರಾತ್ ನ ಪೋರಬಂದರ್ ಕರಾವಳಿ ಸಮೀಪ ಮೂರು ಬೋಟ್ ಗಳು ಪತ್ತೆಯಾಗಿದ್ದವು. ಒಂದು ಬೋಟ್ ನಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ತುಂಬಲಾಗಿತ್ತು. ನೌಕಾಪಡೆ ಈ ಬೋಟ್ ಹಿಂಬಾಲಿಸಿದಾಗ ಬೋಟ್ ಸ್ಫೋಟಗೊಂಡಿತ್ತು. ಸಿಕ್ಕಿಹಾಕಿಕೊಳ್ಳುವ ಭೀತಿಯಿಂದ ದೋಣಿಯಲ್ಲಿದ್ದವರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿರುವ ಶಂಕೆ ವ್ಯಕ್ತವಾಗಿತ್ತಲ್ಲದೇ ಈ ಬೋಟ್ ಪಾಕಿಸ್ತಾನದ ಕರಾಚಿಯಿಂದ ಉಗ್ರರನ್ನು ಹೊತ್ತುತರುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿತ್ತು.
ಈ ನಡುವೆ, ದೋಣಿಯಲ್ಲಿದ್ದವರು ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಸೇರಿದ ಉಗ್ರರಾಗಿದ್ದು, ಇವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಹಣ ನೀಡಲಾಗಿತ್ತು. ದೇಶದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸುವುದು ದೋಣಿಯಲ್ಲಿ ಬರುತ್ತಿದ್ದ ವ್ಯಕ್ತಿಗಳ ಮುಖ್ಯ ಗುರಿಯಾಗಿತ್ತು. ಇದರಲ್ಲಿ ಅಪಾರ ಸ್ಫೋಟಕಗಳಿದ್ದವು. ಈ ದೋಣಿಯಲ್ಲಿ ಪಾಕಿಸ್ತಾನ ಸೇನಾ ಸಿಬ್ಬಂದಿ ಬಳಸುವ ವೈರ್ಲೆಸ್ ಸೆಟ್ಗಳು ಪತ್ತೆಯಾಗಿವೆ. ಇದು ದಾಳಿಕೋರರಿಗೆ ಪಾಕಿಸ್ತಾನ ಸರ್ಕಾರದ ಕುಮ್ಮಕ್ಕಿತ್ತು ಎಂಬುದನ್ನು ಸಾಬೀತು ಮಾಡುತ್ತದೆ ಎಂದು ಮೂಲಗಳನ್ನು ಉಲ್ಲೇಖೀಸಿ ಕೆಲ ಮಾಧ್ಯಮಗಳು ವರದಿ ಮಾಡಿದ್ದವು.
ಆದರೆ ಭಾರತದ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನ ಸರ್ಕಾರ ಕೊನೆಗೂ ಘಟನೆಗೆ ಸಂಬಂಧಿಸಿದಂತೆ ಮೌನ ಮುರಿದು ಹೇಳಿಕೆ ನೀಡಿದೆ.