ಅಹಮದಾಬಾದ್ : ಕಳೆದ ವರ್ಷ ಡಿಸೆಂಬರ್ 31ರಂದು ಗುಜರಾತ್ ನ ಪೋರಬಂದರ್ ಕರಾವಳಿ ತೀರದಲ್ಲಿ ಶಸ್ತ್ರಾಸ್ತ್ರ ತುಂಬಿದ್ದ ಪಾಕ್ ಉಗ್ರರ ಬೋಟನ್ನು ನಾವು ಸುಟ್ಟಿಲ್ಲ, ಅವರೇ ಸ್ಫೋಟಿಸಿಕೊಂಡಿದ್ದು ಎಂದು ಕೋಸ್ಟ್ಗಾರ್ಡ್ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಬಿ.ಕೆ.ಲೋಶಾಲಿ ಸ್ಪಷ್ಟನೆ ನೀಡಿದ್ದಾರೆ.
ದೋಣಿಯನ್ನು ಸ್ಪೋಟಿಸಿಬಿಡಿ. ನಾವು ಅವರಿಗೆ ಬಿರಿಯಾನಿ ತಿನ್ನಿಸಲು ಬಯಸುವುದಿಲ್ಲ ಎಂದು ಕೋಸ್ಟ್ಗಾರ್ಡ್ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಬಿ.ಕೆ.ಲೋಶಾಲಿ ಸೂಚಿಸಿದ್ದರು ಎಂದು ಆಂಗ್ಲ ಮಾಧ್ಯಮ ಪತ್ರಿಕೆಯೊಂದು ವರದಿ ಮಾಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಲೋಶಾಲಿ ಪ್ರಕಟಿತ ವರದಿ ಸತ್ಯಕ್ಕೆ ದೂರವಾದುದು. ಆ ಘಟನೆಯನ್ನು ನೇರವಾಗಿ ನಾನು ನಿರ್ವಹಿಸಿಲ್ಲ. ವಾಯುವ್ಯ ಭಾಗದ ಕರಾವಳಿ ರಕ್ಷಣಾ ವಲಯದ ಕಮಾಂಡರ್ ಅದನ್ನು ನಿರ್ವಹಿಸುತ್ತಿದ್ದರು. ಹಾಗಿದ್ದರೂ, ದೇಶದ್ರೋಹಿ ಶಕ್ತಿಗಳಿಗೆ ಬಿರಿಯಾನಿ ತಿನ್ನಿಸುವ ಅಗತ್ಯವಿಲ್ಲ ಎಂಬ ನನ್ನ ಹೇಳಿಕೆ ನಿಜ. ಪಾಕ್ ದೋಣಿಯನ್ನು ಕರಾವಳಿ ರಕ್ಷಣಾ ಪಡೆ ಸ್ಪೋಟಿಸಿಲ್ಲ. ಅದರಲ್ಲಿದ್ದ ಶಂಕಿತ ಉಗ್ರರೇ ಸ್ಪೋಟಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಫೋಟಕಗಳನ್ನು ಹೊತ್ತ ಪಾಕ್ ದೋಣಿ ಅರಬ್ಬೀ ಸಮುದ್ರದಲ್ಲಿ ಭಾರತದತ್ತ ಧಾವಿಸುತ್ತಿದೆ ಎಂಬ ಖಚಿತ ಗುಪ್ತಚರ ವರದಿ ಮೇರೆಗೆ ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆಗಿಳಿದಿತ್ತು. ದೋಣಿಯನ್ನು ಸುತ್ತುವರಿದು ಅದರಲ್ಲಿದ್ದ ವ್ಯಕ್ತಿಗಳಿಗೆ ಶರಣಾಗುವಂತೆ ಸೂಚಿಸಿದಾಗ ಅವರು ರಕ್ಷಣಾ ಪಡೆಗಳ ಜತೆ ಗುಂಡಿನ ಕಾಳಗಕ್ಕಿಳಿದರು. ಅಂತಿಮವಾಗಿ ರಕ್ಷಣಾ ಪಡೆಗಳು ದೋಣಿಯನ್ನು ಸ್ಫೋಟಿಸಿದವು ಎಂದು ರಕ್ಷಣಾ ಸಚಿವಾಲಯ ಹೇಳಿತ್ತು.