ಬೆಂಗಳೂರು : ಡಾ.ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಭೂಮಿ ನೀಡಿದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ನೆ ನೀಡಿದೆ.
ಸ್ಮಾರಕ ನಿರ್ಮಾಣಕ್ಕೆ ತಡೆ ನೀಡಿರುವ ನ್ಯಾಯಾಲಯ ಯಾವುದೇ ರೀತಿ ಕಾಮಗಾರಿ ನಡೆಸದೇ ಯಥಾಸ್ಥಿತಿ ಕಾಯ್ಡುಕೊಂಡು ಹೋಗಬೇಕು. ಯಾವುದೇ ಮರಗಳನ್ನು ಕೂಡ ಕತ್ತರಿಸಬಾರದು ಎಂದು ನ್ಯಾಯಾಲಯ ತಿಳಿಸಿದೆ.
ಬೆಳಿಗ್ಗೆಯಷ್ಟೆ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸ್ವತ: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಗುದ್ದಲಿಪೂಜೆ ನೆರವೇರಿಸಿದ್ದರು. ಆದರೆ ಗುದ್ದಲಿ ಪೂಜೆ ನೆರವೇರಿಸಿ ಕೆಲವೇ ಕ್ಷಣಗಳಲ್ಲಿ ಹೈಕೋರ್ಟ್ ತಡೆಯಾಜ್ನೆ ನೀಡಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅಲ್ಲದೇ ಮುಂದಿನ ವಿಚಾರಣೆವರೆಗೂ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಎಂದು ಕೋಟ್ ಸೂಚಿಸಿದೆ.
ಸ್ಮಾರಕ ನಿರ್ಮಾಣಕ್ಕೆ ನೀಡಿರುವ ಜಾಗ ಅರಣ್ಯಪ್ರದೇಶವಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶವನ್ನು ಉಲ್ಲಂಘಿಸಲಾಗಿದೆ. ಅರಣ್ಯಪ್ರದೇಶದ 1೦೦ ಮೀ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವಂತಿಲ್ಲವೆಂದು ನ್ಯಾಯಾಲಯ ತಿಳಿಸಿದೆ.
ಮೈಲಸಂದ್ರದ ಸರ್ವೆ ನಂ.22ರಲ್ಲಿ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಜಾಗ ನೀಡಿತ್ತು. ಅಲ್ಲದೇ ಇದು ಕಂದಾಯ ಭೂಮಿಯಾಗಿರುವುದರಿಂದ ಸ್ಮಾರಕ ನಿರ್ಮಾಣ ಮಾಡಬಹುದು ಎಂದು ಸರ್ಕಾರ ಹೇಳಿತ್ತು. ಆದರೆ ಕಾನೂನು ಬಾಹಿರವಾಗಿ ಜಮೀನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ಪರಿಸರವಾದಿ ಶರತ್ ಬಾಬು ಸ್ಮಾರಕ ನಿರ್ಮಾಣಕ್ಕೆ ತಡೆಕೋರಿ ಹೈಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದರು.