ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇದೇ ಶುಕ್ರವಾರ ವೋಲ್ವೋ ಬಸ್ನಲ್ಲಿ ಮುಂಬೈಯಿಂದ ಪುಣೆಗೆ ಪ್ರಯಾಣಿಸಲಿದ್ದಾರೆ.
ಈ ಪ್ರಯಾಣದಲ್ಲಿ ಅವರು ದೇಶದ ಉನ್ನತ ಬ್ಯಾಂಕ್ಗಳ ಮುಖ್ಯಸ್ಥರೊಡನೆ ಬಸ್ನಲ್ಲೇ ಚರ್ಚೆ ನಡೆಸಲಿದ್ದಾರೆ.
ಹಣಕಾಸು ಸಚಿವಾಲಯ ಶುಕ್ರವಾರ ಮತ್ತು ಶನಿವಾರ ಪುಣೆಯ ನ್ಯಾಶನಲ್ ಇನ್ಸ್ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್ಮೆಂಟ್ ಕ್ಯಾಂಪಸ್ನಲ್ಲಿ ’ಜ್ನಾನ ಸಂಗಮ'ಸಮಾವೇಶ ಏರ್ಪಡಿಸಿದೆ. ಇದರಲ್ಲಿ ಮೋದಿ ಮತ್ತು ಬ್ಯಾಂಕ್ ಅಧಿಕಾರಿಗಳು ಭಾಗವಹಿಸುತ್ತಾರೆ.
ಇದಕ್ಕೂ ಮುನ್ನ ಮೋದಿ ಅವರು ಬಸ್ನಲ್ಲೇ ಬ್ಯಾಂಕ್ ಮುಖ್ಯಸ್ಥರೊಡನೆ 'ಗುಂಪು ಚರ್ಚೆ' ನಡೆಸುತ್ತ ಸಮಾವೇಶಕ್ಕೆ ಆಗಮಿಸುವ ಐಡಿಯಾ ಹರಿಬಿಟ್ಟಿದ್ದಾರೆ. ಬಸ್ ಯಾನದ ವೇಳೆ ಮತ್ತು ಸಮಾವೇಶದಲ್ಲಿ ಬ್ಯಾಂಕಿಂಗ್ ವಲಯವನ್ನು ಸುಧಾರಿಸುವ ಕಾರ್ಯತಂತ್ರಗಳ ಬಗ್ಗೆ ಮೋದಿ ಅವರು ಬ್ಯಾಂಕರ್ಗಳ ಜತೆ ವಿಸ್ತೃತ ಸಮಾಲೋಚನೆ ನಡೆಸಲಿದ್ದಾರೆ.
ಇದರಲ್ಲಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಸಹಿತ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ಗಳ ಅಧ್ಯಕ್ಷರು ಮತ್ತು ಇತರ ಉನ್ನತಾಧಿಕಾರಿಗಳು ಜತೆಯಾಗಲಿದ್ದಾರೆ. ಮುಂಬೈನಿಂದ ಆರಂಭವಾಗುವ 150 ಕಿ.ಮೀ. ಯಾನವು ಪುಣೆ ಕ್ಯಾಂಪಸ್ನಲ್ಲಿ ಮುಕ್ತಾಯವಾಗುತ್ತದೆ.
ಆರ್ಬಿಐ, ನಬಾರ್ಡ್, ವಿಮಾ ಕಂಪೆನಿಗಳು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳು ಜ್ಞಾನ ಸಂಗಮದಲ್ಲಿ ಪ್ರಧಾನಿಗೆ ಬ್ಯಾಂಕಿಂಗ್ ವಲಯದ ಸುಧಾರಣೆ ಕುರಿತು ಪ್ರಾತ್ಯಕ್ಷಿಕೆಗಳನ್ನು ನೀಡಲಿವೆ.
ಬ್ಯಾಂಕ್ ಉನ್ನತಾಧಿಕಾರಿಗಳ ಜತೆಗೆ ಮೋದಿ ಸಾರ್ವಜನಿಕ ವಲಯದ ಬ್ಯಾಂಕ್ಗಳ ಬಲವರ್ಧನೆ ಮತ್ತು ಪುನರ್ರಚನೆ, ಪರಿಣಾಮಕಾರಿ ಸಾಲ ವಸೂಲಿ ವಿಧಾನ, ಮಾನವ ಸಂಪನ್ಮೂಲ, ಬ್ಯಾಂಕ್ಗಳಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ, ಜಾಗತಿಕ ಬ್ಯಾಂಕಿಂಗ್ ಸ್ಥಿತಿಗತಿ, ವಿತ್ತೀಯ ಸಾಕ್ಷರತೆ , ನೇರ ಸಬ್ಸಿಡಿ ವರ್ಗ ಕುರಿತು ಚರ್ಚಿಸಲಿದ್ದಾರೆ.