ನವದೆಹಲಿ : ಗೋವಾದಲ್ಲಿ ಆಯೋಜಿಸಿದ್ದ ಮದುವೆ ಕಾರ್ಯಕ್ರಮಕ್ಕೆ ತೆರಳಲು ಜೇಟ್ಲಿ ಕುಟುಂಬದವರು ನೌಕಾ ಪಡೆಯ ಹೆಲಿಕಾಪ್ಟರ್ ನ್ನು ಬಳಿಸಿದ್ದರು ಎಂಬ ಆರೋಪವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಳ್ಳಿಹಾಕಿದ್ದಾರೆ.
ಗೋವಾದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲರಾಗಿರುವ ಐರಸ್ ರೋಡ್ರಿಕ್ಸ್, ಈ ಕುರಿತು ಜೇಟ್ಲಿ ವಿರುದ್ಧ ಆರೋಪ ಮಾಡಿದ್ದರು. ಡಿ.23 ರಂದು ಗೋವಾನಲ್ಲಿ ನಡೆದಿದ್ದ ಮದುವೆ ಸಮಾರಂಭವೊಂದಕ್ಕೆ ತೆರಳಲು ಅರುಣ್ ಜೇಟ್ಲಿ ಅವರ ಪತ್ನಿ ಹಾಗೂ ಅವರ ಮಗಳು, ನೌಕಾ ಪಡೆಯ ಹೆಲಿಕಾಪ್ಟರನ್ನು ಸ್ವಂತ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅರುಣ್ ಜೇಟ್ಲಿ, ಆರೋಪವನ್ನು ನಿರಾಕರಿಸಿದರು. ನೌಕಾ ಪಡೆಯ ಹೆಲಿಕಾಪ್ಟರನ್ನು ನನ್ನ ಪತ್ನಿ ಮತ್ತು ಮಗಳು ಬಳಸಿಲ್ಲ. ಇವರಿಬ್ಬರು 23ನೇ ತಾರಿಖಿನಂದು ಗೋವಾದಲ್ಲಿ ಇದ್ದರು. ನನ್ನ ಕುಟುಂಬದವರು ಯಾವುದೇ ಸರ್ಕಾರಿ ಸವಲತ್ತುಗಳನ್ನು ಉಪಯೋಗಿಸಿಕೊಳ್ಳದಿರುವಾಗ, ನೌಕಾ ಪಡೆಯ ಹೆಲಿಕಾಪ್ಟರನ್ನು ಹೇಗೆ ಬಳಸಲು ಸಾಧ್ಯ? ಎಂದು ಪ್ರಶ್ನಿಸಿದರು.
ಇನ್ನು ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದರಿಂದ, ನನ್ನ ಕುಟುಂಬದವರು ಗೋವಾಗೆ ಬಂದಿದ್ದಾರೆ ಎಂಬುದು ರಕ್ಷಣಾ ಸಚಿವ ಪರಿಕ್ಕಾರ್ ಗೆ ಸಹಾ ಈ ವಿಷಯ ಗೊತ್ತಿರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.