ನವದೆಹಲಿ : ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಪ್ರಕರಣ ಸಂಬಂಧ ಬಿಜೆಪಿ ವರಿಷ್ಠರನ್ನು ಭೇಟಿಯಾಗಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ರಾಜಸ್ತಾನ ಮುಖ್ಯಮಂತ್ರಿ ವಸುಂದರಾ ರಾಜೇ ಜೈಪುರಕ್ಕೆ ವಾಪಸಾಗಿದ್ದಾರೆ.
ನೀತಿ ಆಯೋಗ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ವಸುಂದರಾ ರಾಜೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಅರುಣ್ ಜೈಟ್ಲಿ ಅವರನ್ನು ಭೇಟಿ ಮಾಡಲು ಉದ್ದೇಶಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಸುಂಧರಾ ರಾಜೇ ನೀಡಿರುವ ಸಮಜಾಯಿಷಿಗೆ ಬಿಜೆಪಿ ಸಹಮತ ಸೂಚಿಸಿದೆಆದರೆ ಈ ಮೂವರು ವಸುಂದರಾ ಅವರನ್ನು ಭೇಟಿ ಮಾಡಲು ನಿರಾಕರಿಸಿದ ಕಾರಣ ವಸುಂದರಾ ರಾಜೇ ಜೈಪುರಕ್ಕೆ ವಾಪಾಸಾಗಿದ್ದಾರೆ ಎಂದು ತಿಳಿದುಬಂದಿದೆ.
ವಸುಂದರಾ ರಾಜೇ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಂತೆ ಎಲ್ಲೆಡೆಯಿಂದ ಒತ್ತಡ ಹೆಚ್ಚಾಗುತ್ತಿದೆ. ಆದರೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವು ಹಿರಿಯ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಬಳಿ ವಸುಂದರಾ ಅವರನ್ನು ಸಮರ್ಥಿಸಿಕೊಂಡು ಕ್ಲೀನ್ ಚಿಟ್ ನೀಡಿದ್ದಾರೆ ಎನ್ನಲಾಗಿದೆ.
2011ರಲ್ಲಿ ಲಲಿತ್ ಮೋದಿಯ ಪತ್ನಿ, ತನ್ನ ಗೆಳತಿ ಮಿನಾಲ್ಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹೇಳಿಕೆಯೊಂದನ್ನು ತಯಾರಿಸಿ ಅದಕ್ಕೆ ಸಹಿ ಮಾಡಿರುವುದಾಗಿಯೂ, 2013ರಲ್ಲಿ ಇಮೇಲ್ ಮೂಲಕ ಈ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾಗಿಯೂ ವಸುಂಧರಾ ಅವರು ಬಿಜೆಪಿ ನಾಯಕತ್ವಕ್ಕೆ ಶುಕ್ರವಾರ ಮನವರಿಕೆ ಮಾಡಿದ್ದರು.
ಆ ಅವಧಿಯಲ್ಲಿ ಲಲಿತ್ ಮೋದಿ ವಿರುದ್ಧ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಯಾವುದೇ ಕಾನೂನಿನ ತೊಡಕು ಆಗಬಾರದು ಮತ್ತು ವಿವಾದ ಉಂಟಾಗಬಾರದೆಂಬ ಕಾರಣಕ್ಕೆ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿರುವುದಾಗಿ ವಸುಂಧರಾ ಬಿಜೆಪಿ ನಾಯಕತ್ವಕ್ಕೆ ಹೇಳಿದ್ದರು.