ನವದೆಹಲಿ : 1984ರಲ್ಲಿ ನಡೆದ ಸಿಖ್ ದಂಗೆ ಹತ್ಯಾಕಾಂಡವಾಗಿತ್ತು. ಸಿಖ್ ದಂಗೆ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪಶ್ಚಿಮ ದೆಹಲಿಯ ತಿಲಕ್ ವಿಹಾರ್ ಪುನರ್ವಸತಿ ಕಾಲನಿಯಲ್ಲಿ 1984ರ ಸಿಖ್ ದಂಗೆ ಸಂತ್ರಸ್ತರನ್ನು ಭೇಟಿ ಮಾಡಿ ಚೆಕ್ ವಿತರಿಸಿದ ರಾಜನಾಥ್ ಸಿಂಗ್, ನಾನಿಲ್ಲಿ ರಾಜಕೀಯ ಭಾಷಣ ಮಾಡಲು ಬಂದಿಲ್ಲ, ಆದರೆ ಕೆಲವೊಂದು ವ್ಯಕ್ತಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ನನಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸವಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರಿಗೆ ಸಂತ್ರಸ್ತರಿಗೆ ನೆಮ್ಮದಿ ಸಿಗಲ್ಲ. ಸರ್ಕಾರ ನಿಮ್ಮೊಂದಿಗೆ ಇದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ತಿಳಿಸಿದರು.
ಸಂತ್ರಸ್ತರಿಗೆ ಪರಿಹಾರ ಒದಗಿಸುವುದಕ್ಕಾಗಿ ನಾವು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದೇವೆ. ಸಂತ್ರಸ್ತರು ತಮ್ಮ ದೂರುಗಳನ್ನು ಈ ಸಮಿತಿಗೆ ಸಲ್ಲಿಸುವ ಮೂಲಕ ಬೇಗನೆ ಪರಿಹಾರ ಒದಗಿಸಲು ನಮಗೆ ಸಾಧ್ಯವಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್, ಸಿಖ್ ದಂಗೆಯಲ್ಲಿ ಜೀವ ಕಳೆದುಕೊಂಡ ವ್ಯಕ್ತಿಗಳ ಕುಟುಂಬಗಳ 16 ಸದಸ್ಯರಿಗೆ ತಲಾ 5 ಲಕ್ಷದ ಚೆಕ್ ವಿತರಿಸಿದರು. ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಶೀಘ್ರದಲ್ಲೇ 2,459 ಜನರಿಗೆ ಚೆಕ್ ವಿತರಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.