ನವದೆಹಲಿ : 1984ರಲ್ಲಿ ನಡೆದಿದ್ದ ಸಿಖ್ ದಂಗೆ ಪ್ರಕರಣ ಕುರಿತಂತೆ ಮರುತನಿಖೆ ನಡೆಸಲು ಇದೀಗ ವಿಶೇಷ ತನಿಖಾ ತಂಡ (ಎಸ್ಐಟಿ)ವೊಂದನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು , ಚುನಾವಣಾ ಪ್ರಕ್ರಿಯೆಗಳು ಮುಗಿದ ನಂತರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ. ಮುಂದಿನ ಒಂದೆರಡು ದಿನಗಳಲ್ಲಿ ವಿಶೇಷ ತನಿಖಾ ತಂಡದಲ್ಲಿ ಇರುವ ಸದಸ್ಯರ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.
ಇಂತಹ ಹಲವು ಪ್ರಕರಣಗಳನ್ನು ಕುರಿತಂತೆ ವರದಿ ನೀಡಲು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಜಿ.ಸಿ.ಮಾಧುರ್ ನೇತೃತ್ವದ ಸಮಿತಿಯು ಅಧ್ಯಯನ ನಡೆಸಿ, ಸುಮಾರು 225 ಇದೇ ರೀತಿಯ ಮರು ಪರಿಶೀಲನೆಗೆ ಅರ್ಹವಾದ ಪ್ರಕರಣದ ಕಡತಗಳು ಬಾಕಿ ಇವೆ ಎಂದು ಹೇಳಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಖಾತೆ ಸಚಿವಾಲಯ ಈ ಸಮಿತಿ ರಚಿಸಿದೆ. ಹಲವು ಪ್ರಕರಣಗಳಲ್ಲಿ ನಿರ್ಣಾಯಕ ಸಾಕ್ಷಿ ಪುರಾವೆಗಳನ್ನು ನಿರ್ಲಕ್ಷಿಸಲಾಗಿದ್ದು , ಅವನ್ನು ಮರು ಪರಿಶೀಲಿಸುವ ಅಗತ್ಯವಿದೆ ಎಂದೂ ಸಮಿತಿ ತಿಳಿಸಿದೆ.
ಪ್ರಕರಣಗಳ ಮರು ಪರಿಶೀಲನೆಗೆ ಕಳೆದ ಡಿಸೆಂಬರ್ನಲ್ಲಿ ನ್ಯಾಯಮೂರ್ತಿ ಜಿ.ಸಿ.ಮಾಧುರ್ ಸಮಿತಿ ರಚಿಸಿ 45 ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸಜ್ಜನ್ ಕುಮಾರ್ ಹಾಗೂ ಜಗದೀಶ್ ಟೈಟ್ಲರ್ ಅವರ ಹೆಸರುಗಳು ಪ್ರಮುಖವಾಗಿವೆ.