ಬೆಂಗಳೂರು : ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಾಯುಕ್ತದಲ್ಲಿ ನಡೆದಿರುವ ಒಂದು ಕೋಟಿ ರೂ. ಹಣದ ಬೇಡಿಕೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿದ ಬೆನ್ನಲ್ಲೇ ಆ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರಿಗೆ ಸಿಸಿಬಿ ಜಂಟಿ ಆಯುಕ್ತ ಚಂದ್ರಶೇಖರ್ ಪತ್ರ ಬರೆದಿದ್ದಾರೆ.
ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಯಾಗಿದ್ದ ರಾಮಾಂಜನೇಯ ಅವರು ನನ್ನ ಮಾವನಾಗಿದ್ದು, ಅವರ ವಿರುದ್ಧ ದಾಳಿ ನಡೆಸಲಾಗಿತ್ತು. ಇದರ ತನಿಖೆ ಲೋಕಾಯುಕ್ತ ಸಂಸ್ಥೆಯಲ್ಲಿ ಇನ್ನೂ ಪ್ರಗತಿ ಹಂತದಲ್ಲಿದೆ. ರಾಮಾಂಜನೇಯ ನನಗೆ ಸಂಬಂಧಿಯಾಗಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತ ತನಿಖೆ ಪಾರದರ್ಶಕವಾಗಿ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗುವ ಸಾಧ್ಯತೆ ಇದೆ. ಹೀಗಾಗಿ ತನಿಖೆಯನ್ನು ತಮಗೆ ವಹಿಸಿರುವ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂದು ಸಿಸಿಬಿ ಜಂಟಿ ಆಯುಕ್ತ ಚಂದ್ರಶೇಖರ್ ಲೋಕಾಯುಕ್ತರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದ್ದ ಹಣದ ಬೇಡಿಕೆ ಪ್ರಕರಣದ ತನಿಖೆಯನ್ನು ಲೋಕಾಯುಕ್ತರು ಶುಕ್ರವಾರ ಸಿಸಿಬಿಗೆ ವಹಿಸಿದ್ದರು. ಅದರಂತೆ ಈ ಕುರಿತು ಲೋಕಾಯುಕ್ತರು ಬರೆದಿರುವ ಪತ್ರವು ಶನಿವಾರ ಸಂಜೆ ಸಿಸಿಬಿ ಜಂಟಿ ನಿರ್ದೇಶಕ ಚಂದ್ರಶೇಖರ್ ಅವರಿಗೆ ತಲುಪಿದೆ. ತಕ್ಷಣವೇ ಅವರು ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರಿಗೆ ಪ್ರತ್ಯುತ್ತರ ಬರೆದಿದ್ದಾರೆ.
ತನಿಖೆ ಆರಂಭಿಸುವ ಮೊದಲು ತಮ್ಮ ಮಾವ ರಾಮಾಂಜನೇಯ ವಿರುದ್ಧ ನಡೆಯುತ್ತಿರುವ ತನಿಖೆಯ ಬಗ್ಗೆ ಮತ್ತು ಇಲಾಖಾ ವಿಚಾರಣೆ ನಡೆಯುತ್ತಿರುವ ಕುರಿತು ಪರಿಶೀಲನೆ ನಡೆಸುವಂತೆ ಪತ್ರದಲ್ಲಿ ಕೋರಿದ್ದಾರೆ ಎಂದು ಹೇಳಲಾಗಿದೆ.
ಸಿಸಿಬಿ ಪೊಲೀಸರು ತನಿಖೆ ನಡೆಸಲು ಯಾವುದೇ ಅಭ್ಯಂತರ ಇಲ್ಲ. ಆದರೆ, ತನಿಖೆ ಆರಂಭವಾದ ಬಳಿಕ ಸಿಸಿಬಿ ತನಿಖೆ ಬಗ್ಗೆ ಯಾವುದೇ ಆರೋಪ ಕೇಳಿ ಬರುವುದು ಸಮಂಜಸವಲ್ಲ. ಹೀಗಾಗಿ ತಮ್ಮ ಆದೇಶವನ್ನು ಮರು ಪರಿಶೀಲನೆ ನಡೆಸಿ ಮುಂದಿನ ಸೂಚನೆ ನೀಡಬೇಕು. ಲೋಕಾಯುಕ್ತರಿಂದ ತನಿಖೆ ನಡೆಸುವಂತೆ ಮತ್ತೂಮ್ಮೆ ಆದೇಶ ಬರುವವರೆಗೆ ತನಿಖೆ ಕೈಗೆತ್ತಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ನಿರ್ಧಾರವನ್ನು ಸಿಸಿಬಿ ಜಂಟಿ ಆಯುಕ್ತ ಕೈಗೊಂಡಿದ್ದಾರೆ ಎಂದು ತಿಳಿಸಲಾಗಿದೆ.
ಸಿಸಿಬಿ ಜಂಟಿ ಆಯುಕ್ತ ಚಂದ್ರಶೇಖರ್ ಬರೆದಿರುವ ಪತ್ರದಿಂದಾಗಿ ಪ್ರಕರಣದ ತನಿಖೆಗೆ ಹಿನ್ನಡೆ ಉಂಟಾಗಿದೆ. ಅಲ್ಲದೆ, ಲೋಕಾಯುಕ್ತರು ತಮ್ಮ ಮುಂದಿನ ನಡೆ ಕುರಿತು ಸಂಸ್ಥೆಯ ಕಾನೂನು ವಿಭಾಗ ಮತ್ತು ಇತರೆ ಅಧಿಕಾರಿಗಳ ಸಲಹೆಗೆ ಮೊರೆಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.