ನವದೆಹಲಿ : ದೆಹಲಿಯಲ್ಲೀಗ ಬಿಜೆಪಿ ಅಲೆ ಇದ್ದು, ಮುಂದಿನ ಸರ್ಕಾರವನ್ನು ಬಿಜೆಪಿಯೇ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಶಾನ್ಯ ದೆಹಲಿಯ ಬರಾಲಾ ಪ್ರದೇಶದಲ್ಲಿ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದೆಹಯಲ್ಲಿ ಈ ಬಾರಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಬಗ್ಗೆ ತಮಗೆ ವಿಶ್ವಾಸವಿದೆ ಎಂದು ಹೇಳಿದರು. ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದರೆ ದೆಹಲಿ ಅಭಿವೃದ್ಧಿಗಾಗಿ ಕೇಂದ್ರದೊಂದಿಗೆ ಉತ್ತಮ ಹೊಂದಾಣಿಕೆ ಏರ್ಪಡಲಿದೆ ಎಂದು ಕೇಂದ್ರ ಎಂದರು.
ಬಿಜೆಪಿಯು ಈಗಾಗಲೇ ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ನಲ್ಲಿ ಅಧಿಕಾರಕ್ಕೆ ಬಂದಿದೆ. ದಿಲ್ಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ದಿನಗಳು ಬಹಳ ದೂರವೇನೂ ಇಲ್ಲ ಎಂದು ಹೇಳಿದರು. ದೇಶದಲ್ಲೀಗ ಗ್ರಾಮಗಳು ಅಭಿವೃದ್ಧಿಯತ್ತ ಸಾಗುತ್ತಿವೆ. ಗ್ರಾಮಾಭಿವೃದ್ಧಿಯಾಗದೇ ದೇಶಾಭಿವೃದ್ಧಿಯಾಗದು ಎಂದು ತಿಳಿಸಿದರು.
ಈಗ ಚಾಲ್ತಿಯಲ್ಲಿರುವ ಕಿಸಾನ್ ಬಿಮಾ ಯೋಜನೆಯು ಅತ್ಯಂತ ಮಹತ್ವಾಕಾಂಕ್ಷೆಯದ್ದಾಗಿದೆ. ಇದೇ ರೀತಿ ಪ್ರಧಾನ ಮಂತ್ರಿ ಜನಧನ ಯೋಜನೆ ಕೂಡ ಯಶಸ್ವಿಯಾಗುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.