ಲಖ್ನೌ : 'ಹಿಂದೂ ಧರ್ಮ'ದಿಂದ ಅನ್ಯ ಧರ್ಮಕ್ಕೆ ಮತಾಂತರವಾಗಿದ್ದವರನ್ನು ವಾಪಸ್ ಕರೆತರುವ ಘರ್ ವಾಪಸಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಿಂದ ತೀವ್ರ ವಿರೋಧವಾಗುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲೇ ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ವಿಶ್ವಹಿಂದೂ ಪರಿಷತ್ ಡಿ.15ರಂದು ಘೋಷಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಾಯ್ ಬರೇಲಿಯ ವಿಶ್ವಹಿಂದೂ ಪರಿಷತ್ ನ ಮುಖಂಡ, ಹರೀಶ್ ಚಂದ್ರ ಶರ್ಮ ಘರ್ ವಾಪಸಿ ಕಾರ್ಯಕ್ರಮದ ಮೂಲಕ ಈಗಾಗಲೇ ಹಿಂದೂ ಧರ್ಮಕ್ಕೆ ವಾಪಸ್ಸಾಗಲು ಇಚ್ಛಿಸುತ್ತಿರುವ 60 ಕುಟುಂಬಗಳನ್ನು ಗುರುತಿಸಲಾಗಿದ್ದು ಯಾವುದೇ ಒತ್ತಡವೂ ಇಲ್ಲದೇ ಅವರು ಹಿಂದೂ ಧರ್ಮಕ್ಕೆ ವಾಪಸ್ಸಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರಾಯ್ ಬರೇಲಿ ಕ್ಷೇತ್ರದಲ್ಲಿ 100 ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರಲಾಗುತ್ತಿದ್ದು ದಿನಾಂಕವನ್ನು ಶೀಘ್ರವೇ ಘೋಷಿಸುವುದಾಗಿ ವಿಹೆಚ್ ಪಿ ಮುಖಂಡರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸುಮಾರು 57 ಮುಸ್ಲಿಂ ಕುಟುಂಬವನ್ನು ಧರ್ಮ ಜಾಗರಣ ಮಂಚ್ ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿತ್ತು. ಈ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿ ಸಂಸತ್ ನಲ್ಲಿ ಪ್ರತಿಭಟನೆ ನಡೆಸಿತ್ತು. ಆದರೆ ಈಗ ಕಾಂಗ್ರೆಸ್ ಅಧಿನಾಯಕಿ ಕ್ಷೇತ್ರದಲ್ಲೇ ವಿಹೆಚ್ ಪಿ 60 ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರುತ್ತಿದೆ.