ಶ್ರೀನಗರ/ರಾಂಚಿ : ಜಮ್ಮು-ಕಾಶ್ಮೀರ ಹಾಗೂ ಜಾರ್ಖಂಡ್ ವಿಧಾನಸಭೆಗೆ ನಡೆಯುತ್ತಿರುವ ಐದು ಹಂತದ ಚುನಾವಣೆಗಳ ಪೈಕಿ ನಾಲ್ಕನೇ ಹಂತದ ಮತದಾನ ಆರಂಭವಾಗಿದೆ.
ಜಮ್ಮು-ಕಾಶ್ಮೀರದಲ್ಲಿ 18 ಕ್ಷೇತ್ರಗಳಿಗೆ ಈ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಹಾಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕ ಮುಫ್ತಿ ಮೊಹಮ್ಮದ್ ಸಯೀದ್ ಸೇರಿದಂತೆ 182 ಅಭ್ಯರ್ಥಿಗಳ ಭವಿಷ್ಯವನ್ನು 14.73 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ. ಕಾಶ್ಮೀರದ 4, ಜಮ್ಮುವಿನ 1 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.
ಬೀರಾ ಹಾಗೂ ಸೋನವಾರ್ ಎರಡೂ ಕ್ಷೇತ್ರಗಳಲ್ಲೂ ಒಮರ್ ಅಬ್ದುಲ್ಲಾ ಕಣಕ್ಕಿಳಿದಿದ್ದಾರೆ. ಈ ಪೈಕಿ ಬೀರಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಮತದಾನ ನಡೆದಿದೆ. ಸೋನವಾರ್ನಲ್ಲಿ ಮತದಾನ ನಡೆಯುತ್ತಿದೆ.
ಜಾರ್ಖಂಡ್ನಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ, ಮೂವರು ಹಾಲಿ ಸಚಿವರು ಸೇರಿದಂತೆ 217 ಅಭ್ಯರ್ಥಿಗಳ ಭವಿಷ್ಯವನ್ನು 43.48,709 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ.
ಈನಡುವೆ ಅಪಹೃತರಾಗಿದ್ದ ಸರ್ ಪಂಚ್ ನೊಬ್ಬನ ಮೃತ ದೇಹ ಉತ್ತರ ಕಾಶ್ಮೀರದ ಸೋಪೋರ್ ಪ್ರದೇಶದಲ್ಲಿ ಶನಿವಾರ ದೊರೆತಿದೆ. ಗುಲಾಮ್ ಮೊಹಮ್ಮದ್ ಮೀರ್(62) ಅವರನ್ನು 6 ಬಂದೂಕುಧಾರಿಗಳು ಅವರ ಮನೆಯಿಂದ ಶುಕ್ರವಾರ ರಾತ್ರಿ 9 ಗಂಟೆಗೆ ಅಪಹರಿಸಿದ್ದರು. ಮೀರ್ ಕುಟುಂಬದವರು ಪೊಲೀಸರಿಗೆ ನೀಡಿದ್ದ ದೂರಿನ ಮೇರೆಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಶನಿವಾರ ಕಳೇಬರ ಸಿಕ್ಕಿದೆ. ವಿಧಾನಸಭಾ ಚುನಾವಣೆ ನಡೆದು 3 ದಿನಗಳ ನಂತರ ಅಪಹರಣ ಪ್ರಕರಣಗಳು ನಡೆಯುತ್ತಿವೆ.