ಬೆಳಗಾವಿ : ಕುಡಿಯುವ ನೀರಿನ ದುರ್ಬಳಕೆಯನ್ನು ತಡೆಯಲು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಗೆ ಮೀಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಂಚಾಯತ್ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಸದಸ್ಯ ಮೃತ್ಯಂಜಯ ಜಿನಗಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮನೆ ಸಂಪರ್ಕ ಹೊಂದಿರುವ ಒಬ್ಬರಿಂದ ಮೂರು ಜನರಿರುವ ಕುಟುಂಬಕ್ಕೆ ತಿಂಗಳಿಗೆ 30ರೂ, ಮತ್ತು ಮೂರು ಜನ ಮೇಲ್ಪಟ್ಟ ಕುಟುಂಬಕ್ಕೆ ಪ್ರತಿಯೊಬ್ಬರಿಗೆ ತಿಂಗಳಿಗೆ ತಲಾ 10ರೂ, ಕೌಟುಂಬಿಕ ಸಂಪರ್ಕವಲ್ಲದೇ ಸಾರ್ವಜನಿಕ ಸಲ್ಲಿ ಸಂಪರ್ಕಗಳಿಗೆ 20ರೂ ನಿಗದಿಪಡಿಸಲಾಗಿದೆ. ಇನ್ನುಳಿದಂತೆ ಗೃಹಬಳಕೆಯಲ್ಲದ ವಾಣಿಜ್ಯೋದ್ಯಮ ಹಾಗೂ ಇತರ ಸಂಪರ್ಕಗಳಿಗೆ ಮೀಟರ್ ಪ್ರಕಾರ ನಿಗದಿಪಡಿಸಿದ ದರ ವಿಧಿಸಲಾಗುವುದು ಎಂದು ಅವರು ಹೇಳಿದರು.
ಬಹು ಗ್ರಾಮ ಕುಡಿಯುವ ನೀರು ಯೋಜನೆಗಳಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕುಡಿಯುವ ನೀರಿನ ನಲ್ಲಿಗಳಿಗೆ ನೀರಿನ ಮೀಟರ್ ಅಳವಡಿಸಲು ಮತ್ತು ಮೀಟರಿನ ವೆಚ್ಚವನ್ನು ಬಿಲ್ಲಿನಲ್ಲಿ ವಸೂಲಿ ಮಾಡಲು ಗ್ರಾಮ ಪಂಚಾಯತ್ಗಳಿಗೆ ಸೂಚಿಸಲಾಗಿದೆ. ಮೀಟರ್ ಖರೀದಿ ಪ್ರಕ್ರಿಯೆಯನ್ನು ಸ್ಥಳೀಯವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಸಲು ಸೂಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಈಗಾಗಲೇ 3ಸಾವಿರ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದ್ದು, ಒಂದು ಸಾವಿರ ಘಟಕಗಳ ಸ್ಥಾಪನೆ ಕಾರ್ಯ ಚಾಲನೆಯಲ್ಲಿದೆ. ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಆದ್ಯತೆ ನೀಡಲು ಸೂಚನೆ ನೀಡಲಾಗಿದೆ. ಘಟಕಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ಆಯಾ ಏಜೆನ್ಸಿಗಳ ಹೊಣೆಯಾಗಿದ್ದು, ಮೇಲ್ವಿಚಾರಣೆ ಜವಾಬ್ದಾರಿಯಲ್ಲಿ ನಿರ್ಲಕ್ಷ ವಹಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸದಸ್ಯ ಆಚಾರ್ ಹಾಲಪ್ಪ ಬಸಪ್ಪ ಅವರ ಪ್ರಶ್ನೆಗೆ ಸಚಿವರು ತಿಳಿಸಿದರು.
ದುಸ್ಥಿತಿಯಲ್ಲಿರುವ ತಾಲೂಕು ಪಂಚಾಯತ್ ವಸತಿ ಗೃಹಗಳ ದುರಸ್ತಿಗೆ ಅಂದಾಜು ಪಟ್ಟಿ ಸಲ್ಲಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ದುರಸ್ತಿಗೆ ತಾಲೂಕು ಪಂಚಾಯತ್ ನಿಧಿಯಿಂದ ಅನುದಾನ ಒದಗಿಸಲಾಗುವುದು. ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ಬಲಗೊಳಿಸಲು ಸರ್ಕಾರ ಬದ್ಧವಾಗಿದ್ದು, ಅದನ್ನು ತೆಗೆದು ಹಾಕುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸದಸ್ಯ ಬಿ.ರಾಮಕೃಷ್ಣ ಅವರ ಪ್ರಶ್ನೆಗೆ ಸಚಿವರು ಸ್ಪಷ್ಟಪಡಿಸಿದರು.