ಬೆಳಗಾವಿ : ಬಿಜೆಪಿ ಶಾಸಕ ಪ್ರಭು ಚೌಹಾಣ್ ಅವರು ಸದನದಲ್ಲಿ ಮೊಬೈಲ್ ವೀಕ್ಷಣೆ ಪ್ರಕರಣ ಮಾರ್ದನಿಸುತ್ತಿದ್ದಂತೆಯೇ, ವಿಧಾನಸಭೆಯಲ್ಲಿ ಶಾಸಕರಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ.
ಈ ಹಿಂದೆ ನೀಲಿ ಚಿತ್ರ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಸದನ ಸಮಿತಿ ಮಾಡಿದ ಶಿಫಾರಸಿನ ಆಧಾರದ ಮೇಲೆ ತಕ್ಷಣದಿಂದಲೇ ವಿಧಾನಸಭೆಯಲ್ಲಿ ಮೊಬೈಲ್ ನಿಷೇಧ ಜಾರಿಯಾಗಲಿದೆ.
ಈ ವಿಷಯವನ್ನು ಪ್ರಕಟಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಸದನದಲ್ಲಿ ಶಿಸ್ತು ಮತ್ತು ಸಭ್ಯತೆ ಕಾಪಾಡಿಕೊಂಡು ಬರಲು ಸದನದ ಒಳಗೆ ಹಾಗೂ ಹೊರಗೆ ಸದಸ್ಯರು ಯಾವ ರೀತಿ ಇರಬೇಕು ಎಂಬುದಕ್ಕೆ ನೀತಿ ಸಂಹಿತೆ ರಚಿಸು ವುದು ಹಾಗೂ ಉಲ್ಲಂಘನೆ ಪರಿಶೀಲನೆಗೆ ನೀತಿ ನಿರೂಪಣಾ ಸಮಿತಿ ರಚಿಸುವ ತೀರ್ಮಾನವನ್ನೂ ಪ್ರಕಟಿಸಿದರು.
ಸದನದಲ್ಲಿ ಮೊಬೈಲ್ ನಿಷೇಧಿಸಲು ತೀರ್ಮಾನ ಕೈಗೊಂಡಿರುವ ಕಾಗೋಡು ತಿಮ್ಮಪ್ಪ ಅವರು ಸೋಮವಾರ ಸದನದ ನಾಯಕರ ಸಭೆ ನಡೆಸಿ, ಸದನದಲ್ಲಿ ಮೊಬೈಲ್ ಬಳಕೆಯಷ್ಟೇ ಅಲ್ಲದೆ ಸದನದ ಒಳಗೆ ಮೊಬೈಲ್ ತರುವುದೂ ನಿಷೇಧಗೊಳಿಸಬೇಕೇ? ನಿಷೇಧ ಮಾಡಿದರೆ ಶಾಸಕನ ಮೊಬೈಲ್ ಇಡಲು ಸ್ಥಳಾವಕಾಶ ಎಲ್ಲಿ ಕಲ್ಪಿಸಬೇಕು? ಶಾಸಕರನ್ನು ತಪಾಸಣೆ ಮಾಡಿ ಒಳಗೆ ಬಿಡುವುದೇ, ಪತ್ರಕರ್ತರು ಹಾಗೂ ಅಧಿಕಾರಿಗಳ ಗ್ಯಾಲರಿಗೂ ಈ ನೀತಿ ಅನ್ವಯಿ ಸಬೇಕೇ ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಶಾಸಕರು ಸದನದ ಒಳಗೆ ಮತ್ತು ಹೊರಗೆ ಹೇಗಿರಬೇಕು ಎಂದು ನೀತಿ ಸಂಹಿತೆ ರೂಪಿಸಲು ಕಾನೂನು ಸಚಿವ ಜಯಚಂದ್ರ ಅಧ್ಯಕ್ಷತೆಯಲ್ಲಿ ನೀತಿ ನಿರೂಪಣಾ ಸಮಿತಿ ರಚನೆಯಾಗಲಿದೆ. ಹಿರಿಯ ಸದಸ್ಯರು ಹಾಗೂ ವಿಧಾನಸಭೆ ಕಾರ್ಯದರ್ಶಿ ಸಮಿತಿ ಯಲ್ಲಿರಲಿದ್ದಾರೆ ಎನ್ನಲಾಗಿದೆ. ಈ ಹಿಂದಿನ ವಿಧಾನಸಭೆಯಲ್ಲಿ ಕೂಡ ಬಿಜೆಪಿಯ ಶಾಸಕರಿಬ್ಬರು ಮೊಬೈಲ್ನಲ್ಲಿ ಅಶ್ಲೀಲ ವೀಡಿಯೋ ನೋಡುವಾಗ ಸಿಕ್ಕಿಬಿದ್ದಿದ್ದರು.
ಹಿಂದಿನ ಸಮಿತಿ ಶಿಫಾರಸು ಏನಿತ್ತು?: ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಾವಳಿಗಳ ನಿಯಮ 324 ರಲ್ಲಿ ಸದನದಲ್ಲಿ ಮಾನ್ಯ ಸದಸ್ಯರು ಉಪಸ್ಥಿತರಿದ್ದಾಗ ನಡವಳಿಕೆಯ ರೀತಿಯ ಬಗ್ಗೆ ವಿವರಿಸಲಾಗಿದ್ದು, ಈ ನಿಯಮ ಬಹಳ ಹಿಂದೆ ರಚಿಸಲಾಗಿದೆ. ಇದರಲ್ಲಿ ಸದನದಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿರುವ ಮೊಬೈಲ್ ಬಳಕೆ ನಿಯಂತ್ರಿಸುವ ಕುರಿತು ಯಾವುದೇ ಉಪ ಬಂಧವಿರುವುದಿಲ್ಲ. ಹೀಗಾಗಿ, ಸದರಿ ನಿಯಮದಲ್ಲಿ ಸದನದಲ್ಲಿ ಮೊಬೈಲ್ ಬಳಕೆಯ ನಿಷೇಧ ಕುರಿತು ಉಪಬಂಧ ಸೇರಿಸಿ ತಿದ್ದುಪಡಿ ಮಾಡುವುದು. ತಿದ್ದುಪಡಿ ಮೂಲಕ ಜಾರಿಯಾಗುವವರೆಗೆ ವಿಧಾನಸಭೆ ಕಾರ್ಯ ಕಲಾಪ ನಡೆಯುವ ಸಂದರ್ಭದಲ್ಲಿ ಸ್ಪೀಕರ್ ಅವರೇ ಮೊಬೈಲ್ ಬಳಕೆಯ ನಿಷೇಧವನ್ನು ಜಾರಿಗೆ ತರಬೇಕು.
ಮೊಬೈಲ್ಗಳಲ್ಲಿ ಆಕ್ಷೇಪಾರ್ಹ ಚಿತ್ರ ವೀಕ್ಷಣೆಯಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟುವ ದಿಸೆಯಲ್ಲಿ ಸದನದಲ್ಲಿ ಶಿಸ್ತು ಮತ್ತು ಸಭ್ಯತೆ ಕಾಪಾಡಿಕೊಂಡು ಬರಲು, ಸದನದ ಒಳಗೆ ಮತ್ತು ಹೊರಗೆ ಸದಸ್ಯರು ಪಾಲಿಸತಕ್ಕ ನೀತಿ ಸಂಹಿತೆ ಮತ್ತು ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಪರಿಶೀಲನೆಗಾಗಿ ಒಂದು ನೀತಿ ನಿರೂಪಣಾ ಸಮಿತಿ ರಚಿಸುವುದು.
ಈ ನಡುವೆ ವಿಧಾನಸಭೆ ಕಲಾಪದ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಭಾವ ಚಿತ್ರವನ್ನು ಮೊಬೈಲ್ನಲ್ಲಿ ಆಕ್ಷೇಪಾರ್ಹ ಭಂಗಿಯಲ್ಲಿ ನೋಡಿದ ಬಿಜೆಪಿಯ ಔರಾದ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ್ ಅವರನ್ನು ಸದನದ ಕಲಾಪದಿಂದ ಶುಕ್ರವಾರ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಯಿತು.
ಆದರೆ, ಸಚಿವ ಅಂಬರೀಷ್ ಹಾಗೂ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮೊಬೈಲ್ ಕ್ಲಿಪ್ಪಿಂಗ್ ವೀಕ್ಷಣೆ ಪ್ರಕರಣದಲ್ಲಿ ಎಚ್ಚರಿಕೆ ಮಾತ್ರ ಪಡೆಯುವುದರೊಂದಿಗೆ ಶಿಕ್ಷೆಯಿಂದ ಪಾರಾದರು.
ತನ್ಮೂಲಕ ಮೊಬೈಲ್ ವೀಕ್ಷಣೆ ಪ್ರಕರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಗುರುವಾರವಿಡೀ ನಡೆದಿದ್ದ ಜಗಳ್ಬಂದಿಯಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿ ಮೇಲುಗೈ ಸಾಧಿಸಿದ್ದರೆ, ಬಿಜೆಪಿ ಮುಖಭಂಗ ಎದುರಿಸಿತು.