ಬೆಂಗಳೂರು : ತೀವ್ರ ವಿವಾದಕ್ಕೀಡಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ವಿವಾದ ಅಂತ್ಯದತ್ತ ಸಾಗಿದೆ. ಹಲವಾರು ದಿನಗಳಿಂದ ಬಾರೀ ವಿವಾದಕ್ಕೆ ಕಾರಣವಾದ ವಾಚ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸರ್ಕಾರದ ವಶಕ್ಕೆ ಒಪ್ಪಿಸುವ ಮೂಲಕ ಹಲವಾರು ದಿನಗಳಿಂದ ನಡೆದಿದ ವಾಗ್ವಾದಕ್ಕೆ ಅಂತ್ಯ ಹಾಡಲು ಯತ್ನಿಸಿದ್ದಾರೆ.
ದುಬಾರಿ ವಾಚ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು, ನಿಲುವಳಿ ಸೂಚನೆಯಡಿ ವಿಸ್ತ್ರತ ಚರ್ಚೆಗೆ ಅವಕಾಶ ನೀಡಬೇಕೆಂದು ಬುಧವಾರ ಬೆಳಗ್ಗೆ ಕಲಾಪ ಆರಂಭವಾದಾಗಲೇ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಹಿಡಿದಿದ್ದವು. ಸದನದಲ್ಲಿ ಪ್ರತಿಭಟನೆ ಕೂಡ ನಡೆಸಿದ್ದರು. ಇದರಿಂದ, ಸದನವನ್ನು 3 ಗಂಟೆಗೆ ಮುಂದೂಡಲಾಗಿತ್ತು.
ಮಧ್ಯಾಹ್ನ 3 ಗಂಟೆಗೆ ಕಲಾಪ ಪುನರಾಂಭವಾದಾಗಲೂ ಬಿಜಪಿ ಮತ್ತು ಜೆಡಿಎಸ್ ವಾಚ್ ವಿಚಾರದಲ್ಲಿ ಕೋಲಾಹಲ, ಗದ್ದಲ ಮುಂದುವರಿಸಿದ್ದವು.
ಕೊನೆಗೆ ವಾಚ್ ಅನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಮೂಲಕ ಸರ್ಕಾರಕ್ಕೆ ಒಪ್ಪಿಸುವುದಾಗಿ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ತೀವ್ರ ಕೋಲಾಹಲದ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೋಡು ಕಲಾಪವನ್ನು ನಾಳೆ ಮಧ್ಯಾಹ್ನ 11ಗಂಟೆಗೆ ಮುಂದೂಡಿದರು.
ನನ್ನ ಹಸ್ತ ಶುದ್ಧವಾಗಿದೆ. ನನ್ನ ಜೀವನ ತೆರೆದಿಟ್ಟ ಪುಸ್ತಕ. ಪ್ರತಿಪಕ್ಷಗಳು ವಾಚ್ ವಿಚಾರ ಮುಂದಿಟ್ಟುಕೊಂಡು ನನ್ನ ತೇಜೋವಧೆಗೆ ಯತ್ನಿಸುತ್ತಿವೆ ಎಂದು ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ವಾಚ್ ಅನ್ನು ಸ್ಪೀಕರ್ ಕಾಗೋಡು ಅವರ ಮೂಲಕ ಸರ್ಕಾರಕ್ಕೆ ಹಸ್ತಾಂತರಿಸುವುದಾಗಿ ಹೇಳಿ ವಾಚ್ ಅನ್ನು ನೀಡಿದರು.
ಸದನದ ನಂತರ ವಿಧಾಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಆರೋಪ ಮುಚ್ಸಿ ಹಾಕಲು ಸಿಎಂ ಹೈಡ್ರಾಮ ಮಾಡುತ್ತಿದ್ದಾರೆ. ವಾಚ್ ಹಸ್ತಾಂತರಿಸಿದರೆ ವಿವಾದ ಮುಗಿಯಲ್ಲ. ಆ ಬಗ್ಗೆ ಸಿಬಿಐ ಅಥವಾ ಕೇಂದ್ರ ಸರ್ಕಾರದ ಇತರೆ ಯಾವುದೇ ಸಂಸ್ಥೆಯಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.