ಬೆಳಗಾವಿ : ನಾಳೆಯಿಂದ ಸದನದೊಳಗೆ ಯಾರೂ ಮೊಬೈಲ್ ತರುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸದನದಲ್ಲಿ ಶಾಸಕ ಪ್ರಭು ಚೌಹಾಣ್ ಮೊಬೈಲ್ ಫೋಟೊ ವೀಕ್ಷಣೆ ವಿಚಾರ ವಿಧಾನಪರಿಷತ್ತಿನಲ್ಲೂ ಪ್ರತಿಧ್ವನಿಸಿತು. ಉಭಯ ಪಕ್ಷಗಳ ನಾಯಕರು ಪರಸ್ಪರ ವಾಗ್ದಾಳಿ ನಡೆಸಿ, ಧರಣಿ ಕೈಗೊಂಡಿದ್ದರು. ಸದನದಲ್ಲಿ ಮೊಬೈಲ್ ನಿಷೇಧ ಮಾಡುವ ಕುರಿತು ಸಮಿತಿ ರಚಿಸುವಂತೆ ಉಭಯ ಪಕ್ಷಗಳ ಸದಸ್ಯರು ವಿಧಾನಪರಿಷತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನೈತಿಕ ಸಮಿತಿ ಕೇವಲ ಪೇಪರ್ನಲ್ಲಿ ಮಾತ್ರ ಕಾಣಬಾರದು. ನೈತಿಕತೆಯನ್ನು ನಮ್ಮಲ್ಲಿ ನಾವೇ ಅಳವಡಿಸಿಕೊಳ್ಳಬೇಕು. ಹಾಗಾಗಿ ನಾಳೆಯಿಂದ ಸದನದೊಳಗೆ ಯಾರು ಮೊಬೈಲ್ ತರುವುದು ಬೇಡ ಎಂದರು.
ಅಶ್ಲೀಲ ಚಿತ್ರ ನೋಡುವುದು ನಾಗರೀಕ ಸಂಸ್ಕೃತಿಯಲ್ಲ, ಸದನದೊಳಗೆ ಮೊಬೈಲ್ನಲ್ಲಿ ಅದು-ಇದು ನೋಡುವುದು, ಎಸ್ಎಂಎಸ್ ಮಾಡುವುದು ಸರಿಯಲ್ಲ. ಸದನದೊಳಗೆ ಮೊಬೈಲ್ ನಿಷೇಧ ಮಾಡುವ ಕುರಿತು ಸಮಿತಿ ರಚಿಸುವುದರಿಂದ ಸರಿಯಾಗದು. ನೈತಿಕ ಸಮಿತಿ ಕೇವಲ ಪೇಪರ್ನಲ್ಲಿ ಮಾತ್ರ ಕಾಣಬಾರದು, ಅದನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವಿಧಾನಸಭೆಯಲ್ಲಿ ನಡೆದ ತಪ್ಪಿಗಾಗಿ, ವಿಧಾನ ಪರಿಷತ್ತಿನಲ್ಲಿ ಧರಣಿ ಮಾಡುವುದು ಸೂಕ್ತವಲ್ಲ. ಜನತೆ ನಮ್ಮನ್ನು ವೀಕ್ಷಿಸುತ್ತಿರುತ್ತಾರೆ. ನಮಗೆ ನಾವೇ ನಿಯಂತ್ರಣ ಮಾಡಿಕೊಳ್ಳಬೇಕು. ಕಳೆದ ವಿಧಾನಮಂಡಲ ಅಧಿವೇಶನದ ವೇಳೆ ಬಿಜೆಪಿ ಶಾಸಕರು ಅಶ್ಲೀಲ ಚಿತ್ರ ವೀಕ್ಷಣೇ ಮಾಡಿದ್ದರು. ಮತ್ತೆ ಅದೇ ಘಟನೆ ಮರುಕಳಿಸಿದೆ. ಅಲ್ಲದೇ ಸದನದಲ್ಲಿ ಕಾಂಗ್ರೆಸ್ ನಾಯಕರೂ ಸಹಾ ಇಂತದ್ದೇ ವರ್ತನೆ ತೋರಿದ್ದಾರೆ. ಅಂಬರೀಶ್ ಮಾಡಿದ್ದರೂ ತಪ್ಪೇ, ಬೇರೆ ಯಾರು ಮಾಡಿದ್ದರೂ ತಪ್ಪು ತಪ್ಪೇ ಎಂದು ಅಸಮಾಧಾನ ಹೊರಹಾಕಿದರು.