ನವದೆಹಲಿ : 'ನಾಥೂರಾಮ್ ಗೋಡ್ಸೆ' ರಾಷ್ಟ್ರೀಯವಾದಿ ಎಂದು ಹೇಳುವ ಮೂಲಕ ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್ ವಿವಾದಕ್ಕೆ ಗುರಿಯಾಗಿದ್ದಾರೆ. ಮಹಾತ್ಮಾ ಗಾಂಧಿಯಷ್ಟೇ ಗೋಡ್ಸೆಯೂ ರಾಷ್ಟ್ರೀಯವಾದಿಯಾಗಿದ್ದ ಎಂದು ಸಾಕ್ಷಿ ಮಹಾರಾಜ್ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ನಾಥೂರಾಮ್ ಗೋಡ್ಸೆ ಶೌರ್ಯ ದಿವಸ್ ಆಚರಣೆ ಬಗ್ಗೆ ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರಸ್ತಾಪಿಸಿದ ಸಂದರ್ಭದಲ್ಲಿ ಉತ್ತರಿಸಿದ ಸಂಸದ ಸಾಕ್ಷಿ ಮಹಾರಾಜ್, ಗಾಂಧಿಯಂತೆಯೇ ಗೋಡ್ಸೆ ಕೂಡ ರಾಷ್ಟ್ರೀಯವಾದಿ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹೇಳಿಕೆಯನ್ನು ಸರಿಪಡಿಸಿಕೊಂಡಿರುವ ಸಾಕ್ಷಿ ಮಹಾರಾಜ್, ನಾನೇನಾದರೂ ತಪ್ಪು ಹೇಳಿಕೆ ನೀಡಿದ್ದರೆ ಅದನ್ನು ವಾಪಸ್ ಪಡೆಯುತ್ತೇನೆ, ನನ್ನ ಪ್ರಕಾರ ಗೋಡ್ಸೆ ರಾಷ್ಟ್ರೀಯವಾದಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ನೆನಪಿನಲ್ಲಿ ಶೌರ್ಯ ದಿವಸ್ ನ್ನು ಆಚರಿಸುತ್ತಿರುವುದರ ಬಗ್ಗೆ ಕಾಂಗ್ರೆಸ್ ಸಂಸದ ಹುಸೇನ್ ದಳವಾಯಿ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಆಗ್ರಾದಲ್ಲಿ ಒತ್ತಾಯಪೂರ್ವಕ ಮತಾಂತರ ನಡೆಯುತ್ತಿದ್ದರೆ ಇಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರನ್ನು ಹತ್ಯೆ ಮಾಡಿದವನ ಶೌರ್ಯದಿನವನ್ನು ಆಚರಿಸಲಾಗುತ್ತಿದೆ. ಇದಕ್ಕೆಲ್ಲಾ ಬಿಜೆಪಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಆರ್.ಎಸ್.ಎಸ್ ಕಾರಣ ಎಂದು ಹುಸೇನ್ ಆರೋಪಿಸಿದ್ದಾರೆ.
ಶೌರ್ಯ ದಿನ ಆಚರಣೆಯಲ್ಲಿ ಬಿಜೆಪಿ ಹೆಸರು ಪ್ರಸ್ತಾಪಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಸರ್ಕಾರ ಮಹಾತ್ಮಾ ಗಾಂಧಿ ಹತ್ಯೆ ಮಾಡಿದವರನ್ನು ಬೆಂಬಲಿಸುತ್ತಿಲ್ಲ, ಹುಸೇನ್ ದಳವಾಯಿ ಅವರ ಆರೋಪವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.